14 ಅಡಿ ಉದ್ದ, 6 ಕೆ.ಜಿ ತೂಕದ ಕಾಳಿಂಗ ಸರ್ಪ ರಕ್ಷಣೆ!

ಮಡಿಕೇರಿ: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೊತ್ನಳ್ಳಿ ಗ್ರಾಮದಲ್ಲಿ ಸೆರೆಯಾಗಿದೆ.

ಗ್ರಾಮದ ಪ್ರಸಾದ್ ಮನೆಯ ಮುಂಭಾಗದಲ್ಲಿರುವ ಮರದ ಕೊಂಬೆ ಮೇಲೆ ಬಂದು ಸೇರಿಕೊಂಡಿದ್ದ 14 ಅಡಿ ಉದ್ದ, 6 ಕೆ.ಜಿ ತೂಕದ ಭಾರೀ ಗಾತ್ರದ ಹಾವನ್ನು ಉರಗ ತಜ್ಞ ರಘು ಹಾಗೂ ಜನಾರ್ಧನ್ ಕಾರ್ಯಾಚರಣೆ ಮಾಡಿ ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಹಾವು ಮನೆಯ ಮುಂಭಾಗದಲ್ಲಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ರಘು ಹಾಗು ಸ್ನೇಹಿತರ ತಂಡ ಸತತ ಒಂದು ಗಂಟೆ ಪ್ರಾಯಾಸ ಪಟ್ಟು ಹಾವನ್ನು ಸೆರೆಹಿಡಿದಿದ್ದಾರೆ. ಸೆರೆ ಹಿಡಿದ ಅಪರೂಪದ ಹಾವನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ರಘು ಹಾವುಗಳ ಅಳಿವಿನ ಬಗ್ಗೆ ಜನರಿಗೆ ಹಾವುಗಳ ಬಗ್ಗೆ ಇರೋ ಕೆಲ ತಪ್ಪು ತಿಳುವಳಿಕೆಗಳ ಬಗ್ಗೆ ಜಾಗೃತಿ ಮೂಡಿಸಿ ಹಾವು ಕಂಡರೆ ಕೊಲ್ಲಬೇಡಿ. ನಮಗೆ ಮಾಹಿತಿ ನೀಡಿ, ನಾವು ಹಾವನ್ನು ರಕ್ಷಿಸಿ ತೆಗೆದುಕೊಂಡು ಹೋಗಿ ಜೀವ ಉಳಿಸುತ್ತೇವೆ ಎಂದು ಮನವಿ ಮಾಡುತ್ತಿದ್ದಾರೆ.

ಕಳೆದ ಹಲವು ವರ್ಷಗಳಿಂದ ಹಾವುಗಳನ್ನ ರಕ್ಷಿಸೋ ಕೆಲಸ ಮಾಡುತ್ತಿರೋ ರಘು ಇದೂವರೆಗೆ 3 ಸಾವಿರಕ್ಕೂ ಹೆಚ್ಚು ಹಾವುಗಳನ್ನ ರಕ್ಷಿಸಿ ಕಾಡಿಗೆ ಮರಳಿಸಿದ್ದಾರೆ. ಇವುಗಳ ಪೈಕಿ 17 ಕಾಳಿಂಗ ಸರ್ಪಗಳು ಸೇರಿವೆ. ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ವಾಸ ಮಾಡೋ ಕಾಳಿಂಗ ಸರ್ಪ ಆಕಸ್ಮಿಕವಾಗಿ ಮನೆಗೆ ಬಂದು ಸೇರಿಕೊಂಡಿತ್ತು. ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದ ರಘು ಸೋಮವಾರಪೇಟೆ ಸಮೀಪದ ಪುಷ್ಪಗಿರಿ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *