14 ದಿನ ಊಟ, ನೀರು ಸೇವಿಸಲಾಗದೇ ನರಳಿ ನರಳಿ ಗರ್ಭಿಣಿ ಆನೆ ಸಾವು

– ಮರಣೋತ್ತರ ಪರೀಕ್ಷೆ ವರದಿ ಬಯಲು

ತಿರುವನಂತಪುರಂ: ಬಾಯಿಯಲ್ಲಿ ಪೈನಾಪಲ್‍ನಲ್ಲಿ ಪಟಾಕಿ ಸಿಡಿದು 15 ವರ್ಷದ ಗರ್ಭಿಣಿ ಆನೆಯ ಸಾವಿನ ದುರಂತಕ್ಕೆ ಇಡೀ  ದೇಶವೇ ಮರಗುತ್ತಿದೆ. ಇದೀಗ ಆನೆಯ ಸಾವಿನ ಪ್ರಾಥಮಿಕ ಮರಣೋತ್ತರ ವರದಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.

ಆನೆಯ ಬಾಯಲ್ಲಿ ಪೈನಾಪಲ್‍ ಸ್ಫೋಟಗೊಂಡ ಪರಿಣಾಮ 14 ದಿನಗಳ ಕಾಲ ಆಹಾರವನ್ನೇ ಸೇವಿಸಿಲ್ಲ ಎಂಬ ಅಂಶ ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ. ಆನೆಯ ಮರಣೋತ್ತರ ಪರೀಕ್ಷೆಯನ್ನು ಮನ್ನಾರ್ ಕಾಡ್ ವಿಭಾಗೀಯ ಆಸ್ಪತ್ರೆಯ ವೈದ್ಯರು ನಡೆಸಿದ್ದಾರೆ. ಪಟಾಕಿ ಸ್ಫೋಟದ ಪರಿಣಾಮ ಆನೆಗೆ ಶ್ವಾಸಕೋಶದ ವೈಫಲ್ಯವಾಗಿದೆ. ಹೀಗಾಗಿ ಆನೆ ಮೃತಪಟ್ಟಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಆನೆ ಹತ್ಯೆಗೈದ ಪ್ರಕರಣ- ಮೂವರು ಶಂಕಿತರು ವಶಕ್ಕೆ

ಕೇರಳದ ಪಾಲಕ್ಕಾಡ್ ಜಿಲ್ಲೆಗೆ ಬಂದಿದ್ದ ಗರ್ಭಿಣಿ ಆನೆಗೆ ಹಸಿವು ತಾಳಲಾಗದೇ ಪೈನಾಪಲ್ ಹಣ್ಣು ತಿಂದಿದೆ. ಈ ವೇಳೆ ಬಾಯಿಯಲ್ಲಿ ಪಟಾಕಿ ಸ್ಫೋಟಗೊಂಡಿದ್ದು, ಆನೆಗೆ ಗಂಭೀರವಾಗಿ ಗಾಯವಾಗಿದೆ. ಇದರಿಂದ ಆನೆಗೆ ಆಹಾರ ಸೇವೆನೆ ಮಾಡಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಅವಳ ನಂಬಿಕೆಯನ್ನು ನಾವು ಉಳಿಸಿಕೊಳ್ಳಲಿಲ್ಲ: ವಿಜಯಲಕ್ಷ್ಮಿ ದರ್ಶನ್

ಅಷ್ಟೇ ಅಲ್ಲದೇ ಆನೆಗೆ ನೀರನ್ನು ಕುಡಿಯಲೂ ಸಹ ಸಾಧ್ಯವಾಗಲಿಲ್ಲ. ಹೀಗಾಗಿ ಗರ್ಭಿಣಿ ಆನೆ ಸುಮಾರು ಎರಡು ವಾರ ಆಹಾರ, ನೀರು ಏನನ್ನು ಸೇವಿಸಲು ಸಾಧ್ಯವಾಗದೇ ನೋವನ್ನು ಅನುಭವಿಸಿದೆ. ಈ ನೋವನ್ನು ನಿವಾರಿಸಿಕೊಳ್ಳಲು ಆನೆ ಸದಾ ನೀರಿನಲ್ಲೇ ಕಾಲಕಳೆಯುತ್ತಿದೆ. ಕೊನೆಗೆ 14 ದಿನಗಳ ಕಾಲ ಹಸಿವು, ಗಾಯದ ನೋವು ಸಹಿಸಿಕೊಂಡು ನೀರಿನಲ್ಲಿ ಮುಳುಗಿ ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದೆ ಎಂದು ವರದಿಯಲ್ಲಿ ಬಯಲಾಗಿದೆ.

ಸದ್ಯಕ್ಕೆ ಗರ್ಭಿಣಿ ಆನೆಯನ್ನು ಹತ್ಯೆಗೈದ ಪ್ರಕರಣದ ಸಂಬಂಧ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಆರೋಪಿ ಕೇರಳದ ಮಲಪ್ಪುರಂ ಜಿಲ್ಲೆಯ ಮನ್ನಾರ್ಕಡ್ ಅರಣ್ಯ ಪ್ರದೇಶದನಾಗಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ಗರ್ಭಿಣಿ ಆನೆ ಮೃತಪಟ್ಟಿದೆ. ಈ ಸಂಬಂಧ ಅನೇಕರು ನಮಗೆ ದೂರು ನೀಡಿದ್ದಾರೆ. ನಿಮ್ಮ ಕಾಳಜಿ ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ ಎಂದು ಭರವಸೆ ನೀಡುತ್ತೇನೆ. ನ್ಯಾಯ ಮೇಲುಗೈ ಸಾಧಿಸುತ್ತದೆ” ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *