2 ವರ್ಷದಿಂದ ಕೂಡಿಟ್ಟಿದ್ದ 12 ಲೋಡ್ ಒಣಹುಲ್ಲು ಸಂಪೂರ್ಣ ಬೆಂಕಿಗಾಹುತಿ

ಚಿಕ್ಕಮಗಳೂರು: ಜಿಲ್ಲೆಯ ಕಡೂರಿನಲ್ಲಿ ಹನಿ ನೀರಿಗೂ ಹಾಹಾಕಾರ. ಒಣ ಹುಲ್ಲಿಗೆ ನೀರಿಗಿಂತ ಬರ. ಹೀಗಿರುವಾಗ ಜಾನುವಾರುಗಳಿಗೆಂದು 2 ವರ್ಷದಿಂದ ಕೂಡಿಟ್ಟಿದ್ದ 12 ಲೋಡ್ ಒಣಹುಲ್ಲು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಬೆಂಕಿಯನ್ನು ಆರಿಸಿದ ಶೈಲಿಯೂ ಭಯಂಕರವಾಗಿದೆ.

ಕಡೂರು ತಾಲೂಕಿನಲ್ಲಿ ಸೂರ್ಯನನ್ನೂ ಸುಡುವಂತಾ ಬಿಸಿಲಿದ್ದು, ಇಂತಹ ಸಂದರ್ಭ ಯಗಟಿಯ ರಾಂಪುರದಲ್ಲಿ 12 ಲೋಡ್ ಒಣ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಬೆಂಕಿಗಿಂತ ಸುಡುತ್ತಿರುವ ಬಿಸಲಿನ ಝಳಕ್ಕೆ ಆರು ಲೋಡ್ ಹುಲ್ಲಿದ್ದ 2 ಬಣವೆಗಳು ಹೊತ್ತಿ ಉರಿಯುತ್ತಿವೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ವಾಹನದಲ್ಲಿದ್ದ ನೀರು ಖಾಲಿಯಾಗಿದೆ.

ನೀರನ್ನು ತುಂಬಿಕೊಳ್ಳಲು ನೀರಿಲ್ಲ. ಬೋರ್ ಇದ್ದರು ಕರೆಂಟ್ ಇಲ್ಲ. ಬೆಂಕಿಯ ಜ್ವಾಲೆ ಹೆಚ್ಚುತ್ತಲೇ ಇದೆ. ಕೂಡಲೇ ಮೆಸ್ಕಾಂಗೆ ಫೋನ್ ಮಾಡಿ ಕರೆಂಟ್ ಸಂಪರ್ಕ ಪಡೆದು ಬೋರ್ ನಿಂದ ಪೈಪ್ ಮೂಲಕ ಅಗ್ನಿಶಾಮಕ ವಾಹನ ಇದ್ದ ಜಾಗಕ್ಕೆ ನೀರಿನ ಪೂರೈಕೆ ಮಾಡಿ ವಾಹನಕ್ಕೆ ಇನ್ ಫ್ಲೋಯಿಂಗ್ ಆಗ್ತಿದ್ದಂತೆ ಔಟ್ ಫ್ಲೋಯಿಂಗ್ ಮೂಲಕ ಬೆಂಕಿ ಆರಿಸಲಾಗಿದೆ.

ಬೆಂಕಿಯನ್ನು ಆರಿಸಲು ಅಗ್ನಿಶಾಮಕ ಸಿಬ್ಬಂದಿಗಳ ಜೊತೆ 60 ಜನ ಪುರುಷರು-ಮಹಿಳೆಯರು ಸಹಕರಿಸಿದ್ದಾರೆ. ಸ್ಥಳೀಯರು ಹುಲ್ಲನ್ನು ಎಳೆದು-ಎಳೆದು ಹಾಕುತ್ತಿದ್ದಂತೆ ನೀರನ್ನು ಬಿಟ್ಟು ಬೆಂಕಿ ನಂದಿಸಲಾಗಿದೆ. ಆದರೆ 12 ಲೋಡ್ ಹುಲ್ಲನ್ನು ಕಳೆದುಕೊಂಡ ರೈತ ತಲೆ ಮೇಲೆ ಕೈ ಹೊದ್ದು ಕೂರುವಂತಾಗಿದೆ.

ಈ ಬಗ್ಗೆ ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Comments

Leave a Reply

Your email address will not be published. Required fields are marked *