ನಿಂತಿದ್ದ ಟ್ರಕ್ ಗೆ ಹಿಂಬದಿಯಿಂದ ವ್ಯಾನ್ ಡಿಕ್ಕಿ – 12 ಮಂದಿ ದುರ್ಮರಣ

ಲಕ್ನೋ: ನಿಂತಿದ್ದ ಟ್ರಕ್ ಗೆ ಹಿಂಬದಿಯಿಂದ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಕ್ಕಿಮ್‍ ಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ.

ಈ ಅಪಘಾತ ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 24ರ ಉಚೌಲಿಯಾ ಪಸ್ಗಾವನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಟಾಟಾ ಮ್ಯಾಜಿಕ್ ವ್ಯಾನ್ ಚಾಲಕ ಅನೂಪ್ ಅವಸ್ಥಿ (25) ಮತ್ತು ಕ್ಲಿನರ್ ಕೀಶನ್ (23) ಮೃತಪಟ್ಟಿದ್ದಾರೆ. ಆದರೆ ಉಳಿದವರ ಗುರುತು ಇನ್ನು ಪತ್ತೆಯಾಗಿಲ್ಲ.

ವ್ಯಾನ್ 17 ಮಂದಿ ಪ್ರಯಾಣಿಕರನ್ನು ಶಹಜಹಾನ್ ಪುರದಿಂದ ಸೀತಾಪುರಕ್ಕೆ ಕರೆದುಕೊಂಡು ಹೋಗುತ್ತಿತ್ತು. ಈ ವ್ಯಾನ್ ಓವರ್ ಲೋಡ್ ಆಗಿ ಪ್ರಯಾಣಿಕರನ್ನ ತುಂಬಿತ್ತು ಎಂದು ತಿಳಿದು ಬಂದಿದೆ. ಹೀಗಾಗಿ ಉಚೌಲಿಯಾ ರಸ್ತೆ ಬದಿಯ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಟ್ರಕ್ಕಿಗೆ ವೇಗವಾಗಿ ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ 12 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆ ರವಾನಿಸಲಾಗಿದೆ. ಈ ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದು, ಅಪಘಾತದಲ್ಲಿ ಮೃತಪಟ್ಟವರಿಗೆ ಸಹಾಯ ಮಾಡುವುದಾಗಿ ಮತ್ತು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Comments

Leave a Reply

Your email address will not be published. Required fields are marked *