ದೇಶದೊಳಗೆ ನುಸುಳಿದ್ದಾರೆ 12 ಉಗ್ರರು: ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಣೆ

ಶ್ರೀನಗರ : 12 ಉಗ್ರಗಾಮಿಗಳ ತಂಡವೊಂದು ಜಮ್ಮು ಕಾಶ್ಮೀರ ಗಡಿ ಮೂಲಕ ಒಳನುಸುಳಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ಮೌಲಾನ ಮಸೂದ್ ಅಜಾದ್ ಮುಖ್ಯಸ್ಥನಾಗಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ 12 ಉಗ್ರಗಾಮಿಗಳ ಗುಂಪು ಗಡಿಪ್ರವೇಶ ಮಾಡಿದೆ. ಮಾಹಿತಿಗಳ ಪ್ರಕಾರ ರಂಜಾನ್ ಉಪವಾಸದ 17ನೇ ದಿನವಾದ ಜೂನ್ 2 ರಂದು ಶ್ರೀನಗರದ ಸೇನೆಯ ಮೇಲೆ ಫಿದಾಯಿನ್ ದಾಳಿ ನಡೆಸುವ ಸಾಧ್ಯತೆಯಿದೆ.

ಉಗ್ರರ ದಾಳಿ ಸೂಚನೆ ಸಿಕ್ಕಿದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಎಲ್ಲಾ ಸ್ಥಳೀಯ ಹೋಟೆಲ್ ಮತ್ತು ವಸತಿ ಗೃಹಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಿದ್ದು, ಜಮ್ಮು ಕಾಶ್ಮೀರ ಮತ್ತು ದೆಹಲಿಯಾದ್ಯಂತ ಹೈ ಅಲರ್ಟ್ ಘೋಷಣೆಯಾಗಿದೆ.

ಕೇಂದ್ರ ಸರ್ಕಾರವು ಮೇ 16ರಂದು ರಂಜಾನ್ ಹಬ್ಬದ ಪ್ರಯುಕ್ತ ಕದನ ವಿರಾಮಕ್ಕೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಭಾರತೀಯ ಸೇನೆಯು ತನ್ನ ಹೆಚ್ಚಿನ ಪಡೆಯನ್ನು ಗಡಿ ಪ್ರದೇಶಗಳಿಂದ ಹಿಂತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಉಗ್ರರು ಸೇನೆಯ ಕಣ್ತಪ್ಪಿಸಿ ಗಡಿ ಪ್ರವೇಶ ಮಾಡಿದ್ದಾರೆಂದು ತಿಳಿದುಬಂದಿದೆ.

ಕದನ ವಿರಾಮ ಜಾರಿಯ ನಂತರ ಗಡಿ ಪ್ರದೇಶದಲ್ಲಿ ಪದೇಪದೇ ಗುಂಡಿನ ಚಕಮಕಿ ನಡೆಯುತ್ತಿದೆ. ಕಳೆದ ಮಂಗಳವಾರ ಕುಪ್ವಾರ ಜಿಲ್ಲೆಯ ಪುಲ್ವಾಮ್ ಅರಣ್ಯ ಪ್ರದೇಶದಲ್ಲಿ ಉಗ್ರರ ನಡುವೆ ಭಾರೀ ಗುಂಡಿನ ಕಾಳಗ ನಡೆದು ಹಲವು ಉಗ್ರರರನ್ನು ಸೇನೆ ಸದೆಬಡಿದಿತ್ತು. ಹಾಗೂ ಇದೇ ತಿಂಗಳು ಶೋಫಿಯಾನ್ ಜಿಲ್ಲೆಯಲ್ಲಿ ನಡೆದ ಕಾಳಗದಲ್ಲಿ ಹಿಜ್ಬುಲ್ ಸಂಘಟನೆಗೆ ಹೊಸದಾಗಿ ನೇಮಕವಾಗಿದ್ದ ಪ್ರೊಫೆಸರ್‍ನನ್ನು ಸೇನೆ ಹೊಡೆದು ಹಾಕಿತ್ತು.

Comments

Leave a Reply

Your email address will not be published. Required fields are marked *