12 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಸಾಗಾಟ – ನಾಲ್ವರ ಬಂಧನ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ಬಳಿಯ ಮೇಲುಪೇಟೆ ಮಸೀದಿ ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 50 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಸೀಜ್ ಮಾಡಿರುವಂತ ಗಾಂಜಾ ಬೆಲೆ ಅಂದಾಜು 12 ಲಕ್ಷಕ್ಕೂ ಅಧಿಕವಾಗಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮೋಹಿದ್ ಖಾನ್, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಕ್ಬರ್ ಪಾಷಾ, ಶಾಹಿದ್ ಖಾನ್ ಹಾಗೂ ಪ್ರಭ ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಿಂದ 50 ಕೆಜಿ ಗಾಂಜಾ, ಕಾರು ಮತ್ತು ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಮಾಯಾಜಾಲದಲ್ಲಿ 10ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ತು ಮಂದಿಯ ತಂಡ ಆಂಧ್ರಪ್ರದೇಶದ ವಿಶಾಖಪಟ್ಟಣದ ಪಾಲೇರು ಬಳಿಯ ಶೇಖರ್ ಎಂಬವರಿಂದ 80 ಕೆಜಿ ಗಾಂಜಾ ಸೊಪ್ಪನ್ನು ತಂದಿದ್ದಾರೆ. 80 ಕೆಜಿ ಗಾಂಜಾ ಸೊಪ್ಪಿನಲ್ಲಿ 30ಕೆಜಿ ಸೊಪ್ಪನ್ನು ಹಾಸನ ಹಾಗೂ ಸಕಲೇಶಪುರದಲ್ಲಿ ಮಾರಾಟ ಮಾಡಿದ್ದಾರೆ. ಉಳಿದ 50 ಕೆಜಿ ಗಾಂಜಾವನ್ನು ಮಂಗಳೂರಿನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಕೊಂಡೊಯ್ಯುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಮಾರುತಿ 800 ಕಾರಿನಲ್ಲಿ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಜಿಲ್ಲೆಯ ಸಿಇಎನ್ ಠಾಣೆ ಇನ್ಸ್‍ಪೆಕ್ಟರ್ ರಕ್ಷಿತ್, ಪಿಎಸ್‍ಐ ರಮ್ಯಾ ಹಾಗೂ ಗೋಣಿಬೀಡು ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಾಂಜಾ ಸಾಗಿಸುತ್ತಿದ್ದ ತಂಡವನ್ನು ರೈಡ್ ಮಾಡಿದ ದೊಡ್ಡ ಪ್ರಕರಣ ಇದಾಗಿದೆ. ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡ ಅಧಿಕಾರಿಗಳನ್ನು ಶ್ಲಾಘಿಸಿದ್ದಾರೆ.

Comments

Leave a Reply

Your email address will not be published. Required fields are marked *