12 ನಿಮಿಷದ ವೀಡಿಯೋ ಚಿತ್ರೀಕರಿಸಿ ಆತ್ಮಹತ್ಯೆಗೆ ಶರಣಾದ ಪತಿ

– ತಮ್ಮನ ಹೆಂಡ್ತಿ ವಿರುದ್ಧ ದೂರು ದಾಖಲಿಸಿದ ಅಣ್ಣ
– ಮೊದಲ ರಾತ್ರಿಯೇ ಪತಿಗೆ ಹೇಳಿದ್ಳು ತನ್ನ ಪ್ರೇಮ ಕಥೆ

ನೋಯ್ಡಾ: ವ್ಯಕ್ತಿಯೋರ್ವ 12 ನಿಮಿಷದ ವೀಡೀಯೋ ಚಿತ್ರೀಕರಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗ್ರೇಟರ್ ನೋಯ್ಡಾದ ಸೆಕ್ಟರ್-1ರಲ್ಲಿ ನಡೆದಿದೆ. ವೀಡಿಯೋದಲ್ಲಿ ಮೃತನ ಹೇಳಿಕೆ ಆಧರಿಸಿ ಆತನ ಪತ್ನಿಯ ವಿರುದ್ಧ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಅರುಣ್ ಕುಮಾರ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ದೆಹಲಿಯ ಗ್ರೇಟರ್ ನೋಯ್ಡಾದ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಅರುಣ್ ಮದುವೆ 2019ರಲ್ಲಿ ಸಿಂಗಮ್ ವಿಹಾರ್ ನಿವಾಸಿ ಧರ್ಮಪಾಲ್ ಎಂಬವರ ಪುತ್ರಿ ಶೀತಲ್ ಜೊತೆ ನಡೆದಿತ್ತು. ಆದ್ರೆ ಇಬ್ಬರ ಸಾಂಸಾರಿಕ ಜೀವನ ಜಗಳಮಯವಾಗಿತ್ತು. ಪತ್ನಿಗೆ ವಿಚ್ಛೇಧನ ನೀಡಿದ್ರೆ 60 ಲಕ್ಷ ರೂ. ಹಣ ನೀಡಬೇಕೆಂದು ಶೀತಲ್ ಕುಟುಂಬಸ್ಥರು ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ದಾಖಲಾಗಿದೆ.

ಮದುವೆಗೂ ಮುನ್ನ ಮನೀಷ್ ಎಂಬ ಯುವಕನನ್ನು ಶೀತಲ್ ಪ್ರೀತಿಸುತ್ತಿದ್ದಳು. ಇಬ್ಬರು ಏಳು ವರ್ಷದಿಂದ ಪ್ರೀತಿಸುವ ವಿಷಯ ತಿಳಿದಿದ್ದರೂ ಕುಟುಂಬಸ್ಥರು ಶೀತಲ್ ಮದುವೆ ಮಾಡಿದ್ದರು. ಮೊದಲ ರಾತ್ರಿಯಲ್ಲೇ ಶೀತಲ್ ತನ್ನ ಲವ್ ವಿಷಯವನ್ನ ಪತಿಗೆ ಹೇಳಿದ್ದಾಳೆ. ಆದ್ರೂ ಅರುಣ್ ಮುಂದಿನ ಜೀವನಕ್ಕಾಗಿ ಕುಟುಂಬಸ್ಥರಿಗೆ ತಿಳಿಸಿರಲಿಲ್ಲ. ಆದ್ರೆ ಪತಿ ಜೊತೆ ಜಗಳ ಮಾಡಿಕೊಂಡು ಪದೇ ಪದೇ ತವರು ಸೇರುತ್ತಿದ್ದ ಶೀತಲ್ ಗಂಡನ ಜೊತೆ ಚೆನ್ನಾಗಿರಲಿಲ್ಲ.

ತವರಿಗೆ ಮಗಳು ಬಂದ್ರೂ ಶೀತಲ್ ಪೋಷಕರು ತಿಳಿ ಹೇಳದೇ ಅಳಿಯನನ್ನು ದೂರುತ್ತಿದ್ದರು. ಪತಿ ಮತ್ತು ಆಕೆಯ ಕುಟುಂಬಸ್ಥ ಕಿರುಕುಳದಿಂದ ನೊಂದ ಅರುಣ್ ವಿಚ್ಛೇಧನಕ್ಕೆ ಮುಂದಾಗಿದ್ದರು. ಆದ್ರೆ ಪರಿಹಾರವಾಗಿ 60 ಲಕ್ಷ ರೂ. ನೀಡಬೇಕೆಂದು ಶೀತಲ್ ಕುಟುಂಬಸ್ಥರು ಹೇಳಿದ್ದರು. ಅಷ್ಟು ಹಣ ತನ್ನಿಂದ ನೀಡಲು ಸಾಧ್ಯವಿಲ್ಲ ಎಂದು ಮಾನಸಿಕವಾಗಿ ಕುಗ್ಗಿದ್ದ ಅಕ್ಟೋಬರ್ 19ರಂದು ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅರುಣ್ ನಿಧನದ ಬಳಿಕ ಸದ್ಯ ಆತ ಮಾಡಿರುವ ವೀಡಿಯೋ ಕುಟುಂಬಸ್ಥರಿಗೆ ಸಿಕ್ಕಿದೆ. ವೀಡಿಯೋ ಆಧರಿಸಿ ಅರುಣ್ ಸೋದರ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Comments

Leave a Reply

Your email address will not be published. Required fields are marked *