ಬಸ್, ಲಾರಿ ನಡುವೆ ಭೀಕರ ಅಪಘಾತ- 11 ಮಂದಿ ಸ್ಥಳದಲ್ಲೇ ಸಾವು

ನವದೆಹಲಿ: ಡಬ್ಬಲ್ ಡೆಕ್ಕರ್ ಬಸ್ಸೊಂದರ ಬ್ರೇಕ್ ಫೇಲ್ ಆಗಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

ಹಜಾರಿಬಾಘ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್ ಜಾರ್ಖಂಡ್‍ನ ರಾಂಚಿಯಿಂದ ಪಾಟ್ನಾ ಜಿಲ್ಲೆಯ ಮಸೌರಿ ಪ್ರದೇಶಕ್ಕೆ ಹೋಗುತ್ತಿತ್ತು. ಈ ವೇಳೆ ಹೆದ್ದಾರಿ ಮಧ್ಯದಲ್ಲಿ ಬಸ್ ಬ್ರೇಕ್‍ಫೇಲ್ ಆಗಿ ಅಪಘಾತವಾಗಿದ್ದು, 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ 25 ಮಂದಿ ಗಾಯಗೊಂಡಿದ್ದಾರೆ. ಈ ಗಾಯಗೊಂಡ ಪ್ರಯಾಣಿಕರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಂಚಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಬಸ್ ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಈ ವೇಳೆ ಬಸ್ ಬ್ರೇಕ್ ಫೇಲ್ ಆಗಿರುವುದನ್ನ ತಿಳಿದ ಚಾಲಕ ವೇಗವಾಗಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದರು. ಆದರೆ, ಅಷ್ಟರಲ್ಲಿ ಬಸ್ ಎದುರು ಬಂದ ಲಾರಿಗೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಬಸ್‍ನ ಕೆಳಮಟ್ಟದ ಡೆಕ್ ಸಂಪೂರ್ಣವಾಗಿ ಹಾನಿಯಾಗಿತ್ತು ಮತ್ತು ಅಪಘಾತದ ನಂತರ ಪ್ರಯಾಣಿಕರನ್ನು ಬಸ್ಸಿನಿಂದ ಹೊರಗೆ ಕರೆತರಲಾಯಿತು ಎಂದು ಗಾಯಗೊಂಡ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಬಸ್ ಬ್ರೇಕ್‍ಫೇಲ್ ಆಗಿದೆ ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ಬಸ್ ಚಾಲಕ ಕೂಗಾಡಿ ಪ್ರಯಾಣಿಕರನ್ನು ಎಚ್ಚರಿಸಿದರು. ಚಾಲಕ ಮತ್ತು ನಿರ್ವಾಹಕ ಇಬ್ಬರು ಪ್ರಯಾಣಿಕರನ್ನು ಉಳಿಸಲು ತಮ್ಮ ಕೈಲಾಗಿದ್ದನ್ನ ಪ್ರಯತ್ನಿಸಿದರು. ಆದರೆ ವೇಗವಾಗಿ ಹೋಗುತ್ತಿದ್ದ ಬಸ್ಸನ್ನು ನಿಲ್ಲಿಸಲು ಸಾಧ್ಯವಾಗಿಲ್ಲ ಎಂದು ಮತ್ತೊಬ್ಬ ಪ್ರಯಾಣಿಕ ಹೇಳಿದ್ದಾರೆ.

ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ನಾವು ಘಟನಾ ಸ್ಥಳಕ್ಕೆ ಹೋಗಿ, ಪರಿಶೀಲನೆ ನಡೆಸಿದ್ದೇವೆ. ಈ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಲೇ ಇರುತ್ತವೆ, ಹೀಗಾಗಿ ಇದನ್ನು ಬ್ಲ್ಯಾಕ್ ಸ್ಪಾಟ್ ಎಂದು ಕರೆಯುತ್ತಾರೆ. ಕಳೆದ 6 ತಿಂಗಳಲ್ಲಿ ಇದೇ ಸ್ಥಳದಲ್ಲಿ 150 ಕ್ಕೂ ಹೆಚ್ಚು ಮಂದಿ ಅಪಘಾತದಲ್ಲೇ ಸಾವನ್ನಪ್ಪಿದ್ದಾರೆ. ನಾವು ಮತ್ತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಈ ಅಪಘಾತದ ಬಗ್ಗೆ ತನಿಖೆ ನಡೆಸುತ್ತೇವೆ ಎಂದರು.

Comments

Leave a Reply

Your email address will not be published. Required fields are marked *