ಗೋವಾದಲ್ಲಿ ಸಿಲುಕಿದ್ದ ಹತ್ತು ಸಾವಿರ ಮಂದಿ ಕರ್ನಾಟಕಕ್ಕೆ ವಾಪಸ್

ಕಾರವಾರ: ಲಾಕ್‍ಡೌನ್‍ನಿಂದ ಗೋವಾದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಜನರಿಗೆ ತಮ್ಮ ಊರುಗಳಿಗೆ ತೆರಳಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದ್ದು, ಇಂದಿನಿಂದ ಗೋವಾದಿಂದ ಕರ್ನಾಟಕಕ್ಕೆ ಬರುವ ಜನರಿಗೆ ಕಾರವಾರ-ಗೋವಾ ಗಡಿಭಾಗದ ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಪಾಸ್ ನೀಡುವ ಮೂಲಕ ತಮ್ಮ ಊರುಗಳಿಗೆ ತೆರಳಲು ಅನುಕೂಲ ಮಾಡಿಕೊಡಲಾಗುತ್ತಿದೆ.

ಗೋವಾ ರಾಜ್ಯದಿಂದ ಕರ್ನಾಟಕಕ್ಕೆ ತೆರಳಲು ಹತ್ತು ಸಾವಿರ ಜನ ನೊಂದಣಿ ಮಾಡಿಕೊಂಡಿದ್ದು, ಇವರಿಗೆ ಕಾರವಾರ ಜಿಲ್ಲೆ ಹಾಗೂ ಬೆಳಗಾವಿ ಜಿಲ್ಲೆಯ ಮೂಲಕ ಪ್ರವೇಶ ನೀಡಲಾಗುತ್ತಿದೆ. ಜೊತೆಗೆ ಆರೋಗ್ಯ ತಪಾಸಣೆ, ಊಟ ಹಾಗೂ ಸಂಚಾರದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದ್ದು, ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಳ್ಳದ ಜನರಿಗೂ ಸಹ ಉತ್ತರಕನ್ನಡ ಜಿಲ್ಲೆಯ ಜಿಲ್ಲಾಡಳಿತ ಸ್ಥಳದಲ್ಲೇ ಅವರವರ ಜಿಲ್ಲೆ ಹಾಗೂ ರಾಜ್ಯಗಳಿಗೆ ತೆರಳಲು ಇಂದಿನಿಂದ ವ್ಯವಸ್ಥೆ  ಮಾಡಿಕೊಡುತ್ತಿದೆ.

ಕರ್ನಾಟಕದ ಹತ್ತು ಸಾವಿರ ಜನರು ಮೊದಲ ಹಂತದಲ್ಲಿ ನೊಂದಣಿ ಮಾಡಿಕೊಂಡಿದ್ದು, ರಾಜ್ಯಕ್ಕೆ ಬರುತ್ತಿರುವ ಮಂದಿಗೆ ಆರೋಗ್ಯ ತಪಾಸಣೆ ನಡೆಸಿ, ನಂತರ 14 ದಿನ ಹೋಮ್ ಕ್ವಾರಂಟೈನ್ ಇರುವಂತೆ ಸೂಚಿಸಿ, ಕೈಗಳಿಗೆ ಸೀಲ್ ಹಾಕುವ ಮೂಲಕ ಅವರ ಸ್ಥಳಗಳಿಗೆ ಕಳುಹಿಸಿಕೊಡಲಾಗುತ್ತಿದೆ.

ಇಂದಿನಿಂದ ಗಡಿಭಾಗದ ಗೋವಾ-ಕಾರವಾರದ ಮಾಜಾಳಿ ಚೆಕ್‍ಪೋಸ್ಟ್ ಬಳಿ ಜಿಲ್ಲಾಡಳಿತ ಪಾಸ್‍ಗಳಿಗಾಗಿ ಕೇಂದ್ರಗಳನ್ನು ತೆರದಿದ್ದು, ಅನಿರ್ದಿಷ್ಟಾವಧಿ ಪಾಸ್ ನೀಡಲಾಗುತ್ತಿದೆ.

Comments

Leave a Reply

Your email address will not be published. Required fields are marked *