ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ – 80 ಕೆಜಿ ಚಿಕನ್, 10 ಲಕ್ಷ ಹಣ ಜಪ್ತಿ

ಬೀದರ್/ಚಿಕ್ಕಬಳ್ಳಾಪುರ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುನಾವಣಾ ಅಧಿಕಾರಿಗಳ ಕಾರ್ಯಾಚರಣೆ ಭರ್ಜರಿಯಾಗಿ ನಡೆಯುತ್ತಿದ್ದು, ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣ ಮತ್ತು ಚಿಕನ್ ನನ್ನು ವಶಪಡಿಸಿಕೊಂಡಿದ್ದಾರೆ.

ಬೀದರ್ ನ ಗಾಂಧಿಗಂಜನ್ ನಲ್ಲಿ ಮತದಾರರಿಗೆ ಹಂಚುತ್ತಿದ್ದ ಬರೋಬ್ಬರಿ 10 ಲಕ್ಷ 50 ಸಾವಿರ ಹಣವನ್ನು ಚುನಾವಣಾ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಗಾಂಧಿಗಂಜ್ ಪೊಲೀಸರು ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಹಿಡಿದಿದ್ದು, ಒಬ್ಬ ಆರೋಪಿಯಾದ ಅಬ್ದುಲ್ ಸಮ್ಮದ್ ನನ್ನು ಬಂಧಿಸಿದ್ದಾರೆ. ಆದರೆ ಒಬ್ಬ ಆರೋಪಿ ಪರಾರಿಯಾಗಿದ್ದಾರೆ.

ಜಪ್ತಿಯಾದ ಹಣ ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್‍ ಗೆ ಸೇರಿದ್ದು ಎನ್ನಲಾಗಿದೆ. ಈ ಘಟನೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನು ಚಿಕ್ಕಬಳ್ಳಾಪುರದಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಚಿಕನ್ ನನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚಿಂತಾಮಣಿ ತಾಲೂಕು ಜೀಡರಹಳ್ಳಿ ಗ್ರಾಮದ ಬಳಿ ಮಾರುತಿ ಓಮ್ನಿ ಕೆಎ-40 ಎಂ-4588 ಕಾರಿನಲ್ಲಿ ಚಿಕನ್ ಸಾಗಾಟ ಮಾಡುತ್ತಿದ್ದರು.

ಈ ವೇಳೆ ಚುನಾವಣಾಧಿಕಾರಿಗಳು ಖಚಿತ ಮಾಹಿತಿ ತಿಳಿದು ದಾಳಿ ನಡೆಸಿದ್ದಾರೆ. ಆಗ ತಲಾ ಒಂದು ಕೆಜಿಯ 80 ಕೆಜಿ ಚಿಕನ್ ಪಾಕೆಟ್ ಪತ್ತೆಯಾಗಿದ್ದು, ಅಧಿಕಾರಿಗಳು ಕಾರು ಸಮೇತ ಚಿಕನ್ ಜಪ್ತಿ ಮಾಡಿದ್ದಾರೆ. ದಾಳಿಯ ವೇಳೆ ಚಾಲಕ ಹಾಗೂ ಮತ್ತೋರ್ವ ಕಾರು ಬಿಟ್ಟು ಪರಾರಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *