ಆಹಾರ ಅರಸಿ ಬಂದಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಕಾರವಾರ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿ ಗ್ರಾಮದ ಬಳಿಯ ಠಾಣೇಗೇರಿಯಲ್ಲಿ ಸೆರೆಹಿಡಿಯಲಾಗಿದೆ.

ಠಾಣೇಗೇರಿಯ ನಿವಾಸಿ ಜಯರಾಮ್ ನಾಯ್ಕ ಅವರ ಮನೆಯ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಈ ಕಾಳಿಂಗ ಸರ್ಪ ಆಹಾರ ಅರಸಿ ಬಂದಿತ್ತು. ಮನೆಯ ಬಳಿ ಕಾಳಿಂಗ ಸರ್ಪವನ್ನು ನೋಡಿದ ಮನೆಯವರು ಗಾಬರಿಗೊಂಡು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿ, ಹಾವನ್ನು ಸೆರೆಹಿಡಿಯುವಂತೆ ಹೇಳಿದ್ದರು.

ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಉರಗ ಪ್ರೇಮಿ ಮನೋಹರ್ ಸ್ಥಳಕ್ಕೆ ಆಗಮಿಸಿದರು. ಬಳಿಕ ಮನೋಹರ ಅವರು ಹಾವನ್ನ ಸೆರೆಹಿಡಿದು ಸ್ಥಳೀಯ ಕತ್ತಲೆಕಾನು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟುಬಂದಿದ್ದಾರೆ.

ಹಾವನ್ನು ಸೆರೆಹಿಡಿಯುವಾಗ ಅದು ಉರಗ ತಜ್ಞರ ಮೇಲೆಯೇ ದಾಳಿ ಮಾಡಲು ಯತ್ನಿಸಿತ್ತು. ಆದರೆ ಉರಗ ತಜ್ಞರು ಅದನ್ನು ಯಶಸ್ವಿಯಾಗಿ ಸೆರೆಹಿಡಿದರು. ಈ ವೇಳೆ ಹಾವನ್ನು ನೋಡಲು ಸಾಕಷ್ಟು ಮಂದಿ ಸ್ಥಳದಲ್ಲಿ ನೆರೆದಿದ್ದರು. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *