ಮೂಢನಂಬಿಕೆಗೆ ಕಂದಮ್ಮ ಬಲಿ – ಚಿಕಿತ್ಸೆ ಬದಲು ಬರೆ ಎಳೆದ ತಾಂತ್ರಿಕ

ಗಾಂಧಿನಗರ: ಅನಾರೋಗ್ಯದಿಂದ ಬಳಲುತ್ತಿದ್ದ 1 ವರ್ಷದ ಕಂದಮ್ಮ ಮೂಢನಂಬಿಕೆಗೆ ಬಲಿಯಾಗಿದೆ.

ಗುಜರಾತ್‍ನ ಬನಸ್ಕಾಂತ ಜಿಲ್ಲೆಯ ವಾಸೆಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಾಸೆಡಾ ಗ್ರಾಮದ ವಿಫುಲ್ ಸಾವನ್ನಪ್ಪಿದ ಮಗು. ವಿಫುಲ್‍ಗೆ ಕಳೆದ 10 ದಿನಗಳಿಂದ ಜ್ವರ ಬಂದಿತ್ತು. ಆದರೆ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಬದಲು ತಾಂತ್ರಿಕನ್ನೊಬ್ಬನ ಬಳಿ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿ ಆ ತಾಂತ್ರಿಕ ಜ್ವರ ಕಡಿಮೆಯಾಗುತ್ತದೆ ಎಂದು ಪುಟ್ಟ ಕಂದಮ್ಮನಿಗೆ ಕಬ್ಬಿಣದ ರಾಡ್‍ನಿಂದ ಬರೆ ಹಾಕಿದ್ದಾನೆ. ಇದರಿಂದ ಮಗುವಿಗೆ ಸೋಂಕು ತಗುಲಿದ್ದು, ಮನೆಗೆ ಬಂದ ಮೇಲೆ ಮಗುವಿನ ಅನಾರೋಗ್ಯ ಜಾಸ್ತಿಯಾಗಿದೆ.

ಮನೆಯವರು ಮಗುವನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಆಸ್ಪತ್ರೆಯಲ್ಲೇ ಸಾವನ್ನಪ್ಪಿದೆ. ಈ ಮಗುವಿಗೆ ನ್ಯುಮೋನಿಯಾ ಇತ್ತು. ಆದರೆ ಪೋಷಕರ ಮೂಢನಂಬಿಕೆಗೆ ಮಗು ಸಾವನ್ನಪ್ಪಿದೆ. ಮೊದಲೇ ಚಿಕಿತ್ಸೆ ಕೊಡಿಸಿದ್ದರೆ ಮಗು ಉಳಿಯುತಿತ್ತು ಎಂದು ವೈದ್ಯರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *