ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ – ಬೆಂಗ್ಳೂರಲ್ಲಿ ಸೋಂಕು ಶಂಕಿತ ಮೊದಲ ಪ್ರಕರಣ ದಾಖಲು

– ಮೆಡಿಕಲ್ ಅಬ್ಸರ್ವೆಷನ್​ನಲ್ಲಿದ್ದಾರೆ 7 ಮಂದಿ

ಬೆಂಗಳೂರು: ಚೀನಾದ ಡೆಡ್ಲಿ ನೋವೆಲ್ ಕೊರೊನಾ ವೈರಸ್‍ನ ಭೀತಿ ರಾಜ್ಯಕ್ಕೂ ತಟ್ಟಿದೆ. ರಾಜ್ಯದಲ್ಲಿ ಮೊದಲ ಕೊರೊನಾ ವೈರಸ್ ಶಂಕೆಯ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಿಗಳ ಆಸ್ಪತ್ರೆಯಲ್ಲಿ ವೈರಸ್ ಹರಡಿರುವ ಶಂಕೆಯ ಮೇಲೆ ರೋಗಿಯೊಬ್ಬರು ದಾಖಲಾಗಿದ್ದಾರೆ.

ಇದು ರಾಜ್ಯದಲ್ಲಿಯೇ ಮೊದಲ ಪ್ರಕರಣವಾಗಿದ್ದು, ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾದ ರೋಗಿಯ ರಕ್ತದ ಸ್ಯಾಂಪಲ್ ಅನ್ನು ಪುಣೆ ನ್ಯಾಷನಲ್ ವೈರಾಲಜಿ ಇನ್‍ಸ್ಟಿಟ್ಯೂಟ್‍ ಗೆ ಕಳುಹಿಸಲಾಗಿದೆ. ಇಂದು ಸಂಜೆಯೊಳಗೆ ರೋಗಿಯ ವೈದ್ಯಕೀಯ ವರದಿ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರ ಕೈಗೆ ಸಿಗಲಿದೆ. ಬಳಿಕ ಕೊರೊನಾ ವೈರಸ್‍ನ ಸೊಂಕು ತಗುಲಿದೆಯಾ? ಇಲ್ಲವಾ ಎಂಬುದರ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಲಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿ – ಬಾವಲಿ ಸೂಪ್ ಕುಡಿದ ಯುವತಿಯೇ ಕಾರಣವೆಂದ ಚೀನಿಯರು

ಕಳೆದ ಎರಡು ದಿನಗಳ ಹಿಂದೆ ಈ ರೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ವೈರಸ್ ಶಂಕೆಯ ಮೇಲೆ ಆಸ್ಪತ್ರೆಗೆ ದಾಖಲಾದ ರೋಗಿಯು ಕರ್ನಾಟಕದವರಾಗಿದ್ದು, ಹೊರ ರಾಷ್ಟ್ರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಶಂಕೆಯ ಮೇರೆಗೆ ರಾಜೀವ್ ಗಾಂಧಿ ಆಸ್ಪತ್ರೆಗೆ ಈ ರೋಗಿಯನ್ನ ಕಳುಹಿಸಿದ್ದಾರೆ.

ಚೀನಾಗೆ ಹೋಗಿ ಬಂದ ಮೂವರು ಬೆಂಗಳೂರಿಗರು ಹಾಗೂ ಚೀನಾದಿಂದ ಬೆಂಗಳೂರಿಗೆ ಬಿಸಿನೆಸ್ ಉದ್ದೇಶದಿಂದ ಬಂದ ನಾಲ್ಕು ಜನರನ್ನು ಮೆಡಿಕಲ್ ಅಬ್ಸರ್ವೆಷನ್​ನಲ್ಲಿ ಇಡಲಾಗಿದೆ. ಏಳು ಮಂದಿಯಲ್ಲಿ ಒಬ್ಬರಲ್ಲಿ ಕೊರೊನಾ ವೈರಸ್‍ನ ಗುಣ ಲಕ್ಷಣಗಳು ಹೆಚ್ಚಾಗಿರೋದರಿಂದ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ವೈದ್ಯಕೀಯ ವರದಿ ಕೂಡ ನೆಗಟಿವ್ ಇದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಕೊರೊನಾ ವೈರಸ್ ಭೀತಿ, ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ!
ರಾಜ್ಯಕ್ಕೂ ಮಾರಕ ಕೊರೊನಾ ವೈರಸ್ ಭೀತಿ ತಟ್ಟಿದೆ. ಈ ಹಿನ್ನಲೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ ಹೆಲ್ತ್ ಸ್ಕ್ರೀನಿಂಗ್ ಮಾಡಲಾಗ್ತಿದೆ. ನಿತ್ಯವೂ ಪ್ರಯಾಣಿಕರನ್ನು ಆರೋಗ್ಯಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಏಳು ಜನರಿಗೆ ಸೊಂಕಿನ ಲಕ್ಷಣಗಳು ಕಂಡು ಬಂದಿದ್ದು, ಅವರನ್ನ ತಪಾಸಣೆ ಮಾಡಲಾಗಿದೆ. ಆ ಏಳು ಜನರ ಮನೆಗೆ ತೆರಳಿ ನಿತ್ಯ ಆರೋಗ್ಯಧಿಕಾರಿಗಳು ರಕ್ತದ ಸ್ಯಾಂಪಲ್ಸ್ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಅವರಿಗೆ ಮಾಸ್ಕ್ ಧರಿಸಿ ಓಡಾಡುವಂತೆ ಸೂಚನೆ ನೀಡಲಾಗಿದೆ.

Comments

Leave a Reply

Your email address will not be published. Required fields are marked *