ಹೊಸಗುಡ್ಡದಹಳ್ಳಿ ಕೆಮಿಕಲ್ ಫ್ಯಾಕ್ಟರಿ ಅಗ್ನಿ ಅವಘಡ ಕೇಸ್‍ನಲ್ಲಿ ಮತ್ತೊಂದು ಎಫ್‍ಐಆರ್

ಬೆಂಗಳೂರು: ನಗರದ ಹೊಸಗುಡ್ಡದಹಳ್ಳಿ ಬೆಂಕಿ ಅವಘಡ ಘಟನೆಗೆ ಸಂಬಂಧಿಸಿದಂತೆ ಸದ್ಯ ಕೆಮಿಕಲ್ ಗೋದಾಮು ನಡೆಸುತ್ತಿದ್ದ ಕಂಪನಿಯ ಮಾಲೀಕರ ವಿರುದ್ಧ 2ನೇ ಎಫ್‍ಐಆರ್ ದಾಖಲಾಗಿದೆ.

ಶಂಭುಲಿಂಗ ಎಂಬುವರು ರೇಖಾ ಕೆಮಿಕಲ್ಸ್ ವಿರುದ್ಧ ಸ್ಫೋಟಕ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 427, 338, 285 ಅಡಿ ಎಫ್‍ಐಆರ್ ದಾಖಲು ಮಾಡಲಾಗಿದೆ. ಟೀ ಕುಡಿದು ಬರುವಷ್ಟರಲ್ಲಿ ತಮ್ಮ ಲಗೇಜ್ ಟೆಂಪೋಗೆ ಬೆಂಕಿ ತಾಗಿತ್ತು. ಇದೇ ರೀತಿ ಸ್ಥಳದಲ್ಲಿದ್ದ ಉಳಿದ ಐದು ಕಾರು ಹಾಗೂ ಎರಡು ಬೈಕ್‍ಗಳು ಸಹ ಬೆಂಕಿಗಾಹುತಿ ಎಂದು ಮಾಹಿತಿ ನೀಡಿದ್ದಾರೆ.

ರೇಖಾ ಕೆಮಿಕಲ್ಸ್ ಗೋದಾಮಿನಲ್ಲಿ ಕೆಲಸದ ವೇಳೆ ಬೆಂಕಿ ಅವಘಡ ಸಂಭವಿಸಿತ್ತು. ಮಾಲೀಕರ ಎಡವಟ್ಟಿನಿಂದಲೇ ಇಂತಹ ಅವಘಡ ಸಂಭವಿಸಿದೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಂಭುಲಿಂಗ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ. ಘಟನೆಯಲ್ಲಿ ಬರೊಬ್ಬರಿ 40 ಲಕ್ಷಕ್ಕೂ ಅಧಿಕ ಮೌಲ್ಯದ ವಾಹನಗಳು ಭಸ್ಮವಾಗಿದ್ದು, ವಿವಿಧ ಮಾದರಿಯ ಎಂಟು ವಾಹನಗಳು ಬೆಂಕಿಗಾಹುತಿಯಾಗಿದ್ದವು.

ಘಟನೆ ಸಂಬಂಧ ಮೊದಲು ಅಯಾಜ್ ಪಾಷ ಎಂಬುವವರು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ರೇಖಾ ಕೆಮಿಕಲ್ಸ್ ಕಂಪನಿ ಮಾಲೀಕರ ವಿರುದ್ಧ ಎರಡನೇ ಪ್ರಕರಣ ದಾಖಲಾಗಿದ್ದು, ಇದರ ಜೊತೆಗೆ ಮತ್ತಷ್ಟು ದೂರುಗಳ ಕಂಪನಿ ವಿರುದ್ಧ ದಾಖಲಾಗುವ ಸಾಧ್ಯತೆ. ಮಂಗಳವಾರ ನಡೆದಿದ್ದ ಭಾರೀ ಪ್ರಮಾಣದ ಬೆಂಕಿ ಅವಘಡದಲ್ಲಿ ಗೋಡೌನ್ ಸುತ್ತಮುತ್ತಲು ಇದ್ದ ಮನೆಗಳು ಕೂಡ ಸುಟ್ಟು ಕರಕಲಾಗಿದ್ದವು.

Comments

Leave a Reply

Your email address will not be published. Required fields are marked *