‘ಹೈದರಾಬಾದ್‍ಗೆ ಬಾ ಚಿಲ್ ಮಾಡೋಣ’- ರಶ್ಮಿಕಾಗೆ ವಿಜಯ್ ಸಂದೇಶ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ ‘ಹೈದರಾಬಾದ್‍ಗೆ ಬಾ ಚಿಲ್ ಮಾಡೋಣ’ ಎಂದು ನಟ ವಿಜಯ್ ದೇವರಕೊಂಡ  ಫನ್ನಿಯಾಗಿ ಸಂದೇಶ ರವಾನಿಸಿದ್ದಾರೆ.

ಲಾಕ್‍ಡೌನ್‍ನಿಂದ ಸಿನಿಮಾ ಕೆಲಸಗಳು ಸಂಪೂರ್ಣವಾಗಿ ನಿಂತಿವೆ. ಹೀಗಾಗಿ ರಶ್ಮಿಕಾ ಹೈದರಾಬಾದ್ ಬಿಟ್ಟು ಕೊಡಗಿನ ತಮ್ಮ ಮನೆಯಲ್ಲಿದ್ದಾರೆ. ವಿಜಯ್ ದೇವರಕೊಂಡ ಹೈದರಾಬಾದ್‍ನಲ್ಲಿ ಲಾಕ್ ಆಗಿದ್ದಾರೆ. ಈ ಸಮಯದಲ್ಲಿ ಒಬ್ಬರನೊಬ್ಬರು ಮಿಸ್ ಮಾಡಿಕೊಳ್ಳುತ್ತಿರುವ ರಶ್ಮಿಕಾ ಮತ್ತು ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದಾರೆ.

ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಹುಟ್ಟುಹಬ್ಬ ಇತ್ತು. ಅಂದು ರಶ್ಮಿಕಾ “ನನ್ನ ಕಾಮ್ರೇಡ್ ವಿಜಯ್ ದೇವರಕೊಂಡಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದರು. ಇದೀಗ ಆ ಟ್ವೀಟ್‍ಗೆ ವಿಜಯ್ ದೇವರಕೊಂಡ ರಿಪ್ಲೈ ಮಾಡಿದ್ದು, “ಮಂದಣ್ಣ ಬೇಗ ಹೈದರಾಬಾದ್‍ಗೆ ಬಾ ಚಿಲ್ ಮಾಡೋಣ. ನಮ್ಮ ಗ್ಯಾಂಗ್ ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದೆ” ಎಂದು ಹಾರ್ಟ್ ಮತ್ತು ನಗುವ ಎಮೋಜಿ ಹಾಕಿ  ಟ್ವೀಟ್ ಮಾಡಿದ್ದಾರೆ.

ವಿಜಯ್ ಈ ರೀತಿ ಟ್ವೀಟ್ ಮಾಡುತ್ತಿದ್ದಂತೆಯೇ ಅದಕ್ಕೆ ರಶ್ಮಿಕಾ ಕೂಡ ಸಖತ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನ ಬಿಟ್ಟು ನೀವು ಯಾವುದೇ ಫನ್ ಮಾಡದಿರುವುದೇ ಉತ್ತಮ’ ಎಂದಿದ್ದಾರೆ. ಸದ್ಯ ರಶ್ಮಿಕಾ ಮತ್ತು ವಿಜಯ್ ಒಟ್ಟಿಗೆ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲ. ಆದರೂ ಇಬ್ಬರ ನಡುವೆ ಉತ್ತಮ ಸ್ನೇಹವಿದೆ.

ರಶ್ಮಿಕಾ ಕನ್ನಡಲ್ಲಿ ಧ್ರುವ ಸರ್ಜಾ ಜೊತೆ ‘ಪೊಗರು’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ ‘ಸುಲ್ತಾನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ‘ಪುಷ್ಪ’ ಸಿನಿಮಾ ಮಾಡಬೇಕಿದೆ. ವಿಜಯ್ ದೇವರಕೊಂಡ ‘ಫೈಟರ್’ ಸಿನಿಮಾ ಮಾಡುತ್ತಿದ್ದರೆ.

 

Comments

Leave a Reply

Your email address will not be published. Required fields are marked *