ಹೇಮಾವತಿ ನಾಲೆಯಲ್ಲಿ ಮಣ್ಣು ಕುಸಿತ – ನೀರು ಬಿಡುವ ಮುನ್ನವೇ ದುರಸ್ಥಿಯಾಗಬೇಕಿದೆ ನಾಲೆ

ಹಾಸನ: ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ ದ್ಯಾವೇನಹಳ್ಳಿ ಗ್ರಾಮದ ಹೇಮಾವತಿ ನಾಲೆಯ ಪಂಪ್‍ಹೌಸ್ ಸಮೀಪ ಎರಡು ದಿನಗಳ ಹಿಂದೆ ಸುಮಾರು 80 ಅಡಿ ಎತ್ತರದಿಂದ ನಾಲೆಗೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ.

ಸ್ಥಳಕ್ಕೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮಾತನಾಡಿದ ಅವರು, ‘ಸುರಂಗ ಮಾರ್ಗದ ಪಕ್ಕದಲ್ಲೇ ಭಾರಿ ಪ್ರಮಾಣದಲ್ಲಿ ಮಣ್ಣು ಕಲ್ಲು ಕುಸಿದು ಬಿದ್ದಿದ್ದು, ಈ ಬಗ್ಗೆ ನಮ್ಮ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ನಾಲೆಯಲ್ಲಿ ಬಿದ್ದಿರುವ ಮಣ್ಣು ಹಾಗೂ ಕಲ್ಲನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಇನ್ನೂ ಹೇಮಾವತಿ ಜಲಾಶಯ ಭಾಗದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಡ್ಯಾಂನಿಂದ ನೀರು ಬಿಡುವ ಸಂಭವವಿದೆ. ಆದ್ದರಿಂದ ಅತೀ ಬೇಗ ತೆರವುಗೊಳಿಸುವ ಕೆಲಸವಾಗಬೇಕಾಗಿದೆ. ಈ ದೊಡ್ಡ ನಾಲೆಯಿಂದ ತುಮಕೂರು ಜಿಲ್ಲೆಗೆ ನೀರು ಹರಿಯುವುದರಿಂದ ನಾಲೆಯಲ್ಲಿ ಬಿದ್ದಿರುವ ಮಣ್ಣು ಹಾಗೂ ಕಲ್ಲು ತೆರವುಗೊಳಿಸಲು ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.

Comments

Leave a Reply

Your email address will not be published. Required fields are marked *