ಹೆಲ್ಮೆಟ್ ಧರಿಸದ ಯುವಕನ ಮೇಲೆ ಪೊಲೀಸರ ಹಲ್ಲೆ- ಠಾಣೆಗೆ ಗ್ರಾಮಸ್ಥರ ಮುತ್ತಿಗೆ

ಚಾಮರಾಜನಗರ: ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಯುವಕನೋರ್ವನಿಗೆ ಪಟ್ಟಣದ ಪೊಲೀಸರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಯುವಕ ವಿಡಿಯೋ ಹರಿಬಿಟ್ಟಿದ್ದು ವೈರಲ್ ಆಗಿದೆ.

ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಗ್ರಾಮದ ಮಲ್ಲೇಶ್ ಹಲ್ಲೆಗೊಳಗಾದ ಯುವಕ. ಮಲ್ಲೇಶ್ ಎಡಿಬಿ ಸರ್ಕಲ್ ಬಳಿ ಹೆಲ್ಮೆಟ್ ರಹಿತ ಬೈಕ್ ಚಾಲನೆ ಮಾಡುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿ ಹಿಡಿದು ಪ್ರಶ್ನಿಸಿದ್ದಾರೆ. ಬಳಿಕ ಹೆಲ್ಮೆಟ್ ಧರಿಸದಿದ್ದರಿಂದ ದಂಡ ಕಟ್ಟಲು ತಿಳಿಸಿದ್ದಾರೆ. ಈ ನಡುವೆ ಪೊಲೀಸ್ ಸಿಬ್ಬಂದಿ ಹಾಗೂ ಯುವಕನ ನಡುವೆ ಮಾತಿನ ಚಕಮಕಿಯಾಗಿ ಮಲ್ಲೇಶನ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಪರಿಣಾಮ ಮಲ್ಲೇಶ್ ತುಟಿ ಒಡೆದು ರಕ್ತ ಬಂದಿದೆ ಎಂದು ಆರೋಪಿಸಲಾಗಿದೆ.

ಹಲ್ಲೆಗೊಳಗಾದ ಮಲ್ಲೇಶ್ ಪೊಲೀಸರ ವಿರುದ್ಧ ಫೇಸ್‍ಬುಕ್‍ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವುದು ವೈರಲ್ ಆಗಿದ್ದು ಸಾರ್ವಜನಿಕರಿಂದ ಅಕ್ರೋಶ ವ್ಯಕ್ತವಾಗಿದೆ. ನಂತರ ಮಲ್ಲೇಶ್ ನನ್ನು ಠಾಣೆಗೆ ಕರೆತಂದು ಸಬ್ ಇನ್‍ಸ್ಪೆಕ್ಟರ್ ತಾಜುವುದ್ದೀನ್ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿದೆ. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಮುಡಿಗುಂಡ ಗ್ರಾಮಸ್ಥರು ಪೊಲೀಸ್ ಪೇದೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *