ಹೆಣ್ಣು ಮಗು ಹೆತ್ತಿದ್ದಕ್ಕೆ ಕೊಲೆ- ಪತಿ ಮನೆಯವ್ರ ವಿರುದ್ಧ ಗೃಹಿಣಿ ಪೋಷಕರು ಆರೋಪ

ಹಾಸನ: ಗೃಹಿಣಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪವಾಗಿ ಸಾವನ್ನಪ್ಪಿದ್ದು, ಹೆಣ್ಣು ಮಗು ಹೆತ್ತಿದ್ದಕ್ಕೆ ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೂಳಿಹೊನ್ನೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೆಟ್ಟೇಕೆರೆ ಗ್ರಾಮದ ಲಕ್ಷ್ಮಿದೇವಿ(22)ಯನ್ನು ಗೂಳಿಹೊನ್ನೇನಹಳ್ಳಿ ಗ್ರಾಮದ ಗುರುರಾಜ ಎಂಬಾತನ ಜೊತೆ ಒಂದೂವರೆ ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಲಕ್ಷ್ಮಿದೇವಿಗೆ ಕಳೆದ 11 ತಿಂಗಳ ಹಿಂದೆ ಹೆಣ್ಣು ಮಗು ಜನಿಸಿದ್ದು, ಹೆಣ್ಣು ಮಗುವಾದ ನಂತರ ಗಂಡನ ಮನೆಯವರು ಕಿರುಕುಳ ನೀಡಲಾರಂಭಿಸಿದ್ದರು ಎಂದು ಮೃತಳ ತಂದೆ ಶಿವಲಿಂಗೇಗೌಡ ಆರೋಪ ಮಾಡುತ್ತಿದ್ದಾರೆ.

ಹೆಣ್ಣು ಮಗು ಹೆತ್ತಿದ್ದೀಯಾ ಹೀಗಾಗಿ 5 ಲಕ್ಷ ಹಣ ತರಬೇಕು. ಇಲ್ಲದಿದ್ದರೆ ನಿಮ್ಮ ತವರು ಮನೆಗೆ ವಾಪಸ್ ಹೋಗು ಎಂದು ನಿತ್ಯ ಕಿರುಕುಳ ನೀಡುತ್ತಿದ್ದರು ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಘಟನೆ ನಂತರ ಮೃತಳ ಪತಿ ಮನೆಯವರು ನಾಪತ್ತೆಯಾಗಿದ್ದಾರೆ. ಹೀಗಾಗಿ ಮೃತಳ ಶವವನ್ನು ಗಂಡನ ಮನೆ ಮುಂದೆಯಿಟ್ಟು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಗಂಡನ ಮನೆಯವರನ್ನು ಕೂಡಲೇ ಬಂಧಿಸದಿದ್ದರೆ ಮನೆ ಮುಂದೆಯೇ ಅಂತ್ಯಸಂಸ್ಕಾರ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ. ವಿಷಯ ತಿಳಿದ ತಕ್ಷಣ ಹಿರೀಸಾವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *