ಹುಬ್ಬಳ್ಳಿಯಲ್ಲಿ ನಿಲ್ಲದ ಗಾಂಜಾ ದಂಧೆ – ನಾಲ್ವರು ಅಂದರ್

ಹುಬ್ಬಳ್ಳಿ: ಛೋಟಾ ಮುಂಬೈ ಎಂದು ಹೆಸರುವಾಸಿಯಾಗಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುವವರ ಮೇಲೆ ಪೊಲೀಸರ ದಾಳಿ ಮುಂದುವರಿದಿದೆ. ಸೋಮವಾರ ಎರಡು ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ, 14 ಸಾವಿರಕ್ಕೂ ಹೆಚ್ಚಿನ ಮೊತ್ತದ ಒಂದು ಕೆಜಿಗೂ ಹೆಚ್ಚಿನ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಕೇಶ್ವಾಪುರ ಠಾಣೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ-ಗದಗ ರಸ್ತೆಯ ರೈಲ್ವೇ ಪ್ಲೈ ಓವರ್ ಬ್ರಿಡ್ಜ್ ಬಳಿ ಮೂವರನ್ನು ಬಂಧಿಸಿ, 6 ಸಾವಿರ ಮೌಲ್ಯದ 600 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಗಾಂಧಿವಾಡ ನಿವಾಸಿ ಯಶವಂತ್ ಸಂಗೀತರಾವ್ ಮುನಿಗೇಟಿ (22), ಕುಸುಗಲ್ ರಸ್ತೆಯ ಪ್ರಶಾಂತ್ ತವ್ಮದೆ ಲಾಜರಸ್ ಬಪ್ಪೊರೆ (20), ಚಾಲುಕ್ಯನಗರದ ನೆಲ್ಸನ್ ಯೊಹಾನ ಮೈಲಾ (24) ಬಂಧಿತ ಆರೋಪಿಗಳು. ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಕೇಶ್ವಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಐ ಸುರೇಶ್ ಜಿ. ಕುಂಬಾರ ತನಿಖೆ ನಡೆಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಗೋಕುಲ್ ರೋಡ್ ತಾರಿಹಾಳ ಬೈಪಾಸ್ ರಸ್ತೆ ಬಳಿ ಗಾಂಜಾ ಮಾರುತ್ತಿದ್ದವರನ್ನ ಬಂಧಿಸಿರುವ ಪೊಲೀಸರು 8360 ಮೊತ್ತದ 836 ಗ್ರಾಂ ಗಾಂಜಾ ಮತ್ತು 400 ರೂ. ವಶಪಡಿಸಿಕೊಂಡಿದ್ದಾರೆ. ತಾರಿಹಾಳ ರಾಮನಗರದ ಕುರಿ ಮೇಯಿಸುವಾತ ಇಮಾಮಹುಸೇನ ದಾವಲಸಾಬ ಬಿಜಾಪೂರ (55) ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಗೋಕುಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್‍ಸ್ಪೆಕ್ಟರ್ ನಾಗರಾಜ್ ಎಂ. ಕಮ್ಮಾರ ತನಿಖೆ ಕೈಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *