ಹಾರ್ಟ್ ಅಟ್ಯಾಕ್, ಶುಗರ್ ಇರೋವವರು ಸತ್ರೆ ಏನು ಮಾಡೋದಕ್ಕೆ ಆಗುತ್ತೆ – ಉಮೇಶ್ ಕತ್ತಿ

UMESH KATTI

ಬಾಗಲಕೋಟೆ: ಹಾರ್ಟ್ ಅಟ್ಯಾಕ್ ಶುಗರ್ ಇರುತ್ತದೆ ಅಂತಹ ಕೊರೊನಾ ಸೋಂಕಿತರು ಸತ್ತರೆ ಏನು ಮಾಡುದಕ್ಕೆ ಆಗುತ್ತದೆ ಎಂದು ಸಚಿವ ಉಮೇಶ್ ಕತ್ತಿ ಮತ್ತೆ ಉಡಾಫೆ ಮಾತನಾಡಿ ಸುದ್ದಿಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ಕೋವಿಡ್ ನಲ್ಲಿ ಸಾಕಷ್ಟು ಜನ ಸಾಯುತ್ತಿದ್ದಾರೆ. ನಾನು ಯಾರು ಸಾಯಬಾರದು ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಾಯುವವರು ಯಾಕೆ ಸತ್ತರೂ ಅಂತ ಅನ್ನೋದಕ್ಕೆ ಲೆಕ್ಕ ಇಲ್ಲ. ಕೋವಿಡ್ ಆದ ಸಂದರ್ಭದಲ್ಲಿ ತೊಂದರೆಯಾಗುತ್ತಿವೆ. ರೆಮ್‍ಡಿಸಿವರ್ ಕೊಟ್ಟರೂ ಜನ ಸಾಯುತ್ತಿದ್ದಾರೆ. ಅದಕ್ಕೆ ಏನು ಮಾಡೋಕಾಗುತ್ತದೆ. ಅವರಿಗೆ ಹಾರ್ಟ್ ಅಟ್ಯಾಕ್ ಶುಗರ್ ಇರುತ್ತದೆ. ಅಂತವರು ಸತ್ತರೆ ಏನು ಮಾಡೋದಕ್ಕೆ ಆಗುತ್ತೆ. ಅಂತವರಿಗೆ ಪಂಪ್ ಹೊಡೆದು ಧೈರ್ಯ ತುಂಬೋದಕ್ಕೆ ಆಗುತ್ತಾ? ಧೈರ್ಯ ಕಳೆದುಕೊಂಡವರು ಸಾಯುತ್ತಿದ್ದಾರೆ ಎಂದು ಉಡಾಫೆ ಮಾತನಾಡಿದ್ದಾರೆ.

ಮಾಧ್ಯಮದಲ್ಲಿ ಹೆಣ, ಆಂಬುಲೆನ್ಸ್, ಹೆಣ ಸುಡೋದು ತೋರಿಸಿ ಭಯ ಹುಟ್ಟಿಸಲಾಗುತ್ತಿದೆ. ದಯವಿಟ್ಟು ಹಾಗೆ ತೋರಿಸಬೇಡಿ. ಸ್ವಲ್ಪ ಹಾಡು ಹಾಕಿ ಬೇರೆ ಬೇರೆ ಕಾರ್ಯಕ್ರಮ ಹಾಕಿ. ಮಾಧ್ಯಮ ನೋಡ್ತಿರೋರಿಗೆ ಮಾನಸಿಕ ಆಗುತ್ತಿದೆ. ಹಾಗಾಗಿ ತಾವೂ ಸಹಕಾರ ಮಾಡಿ ಅಂತಾ ವಿನಂತಿ ಮಾಡುತ್ತಿದ್ದೇನೆ ಎಂದರು.

ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದೆ. ಯಾರು ಯಾಕೆ ಸತ್ತರು ಅಂತ ಗೊತ್ತಿಲ್ಲ. ಬುಲೆಟಿನ್ ನಲ್ಲಿ ತಪ್ಪು ಆಗಿರಬಹುದು. ನಾವು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳು ಅಂತ ಹೇಳುತ್ತಿಲ್ಲ. ತಪ್ಪಾಗಿದ್ದರೆ ತಿಳಿಸಿ. ಈ ಬಗ್ಗೆ ಡಿಸಿ ಅವರು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಸಾಯುತ್ತಿರುವವರ ರೇಷಿಯೋ ಹೆಚ್ಚಾಗುತ್ತಿದೆ ಒಪ್ಪುತ್ತೇವೆ. ಆದರೆ ಮೆಡಿಸನ್, ಆಕ್ಸಿಜನ್, ಇಂಜೆಕ್ಷನ್ ಕೊಟ್ಟ ಮೇಲೂ ಧೈರ್ಯ ಕಳೆದುಕೊಂಡು ಸಾಯುವವರು ಇದ್ದಾರೆ. ಅದಕ್ಕೆ ಪರಿಹಾರ ಏನು ಇಲ್ಲ. ಆದ್ರೂ ಸಾಯಬಾರದು ಅಂತಾ ದೇವರಲ್ಲಿ ಪ್ರಾರ್ಥಿಸೋಣ, ಎಲ್ಲರೂ ಕೂಡಿ ಬದುಕಿಸೋಣ ಎಂದು ನುಡಿದರು.

Comments

Leave a Reply

Your email address will not be published. Required fields are marked *