ಹಸಿದ ಹೊಟ್ಟೆಗಳಿಗೆ ಅನ್ನ ಹಾಕಿ: ಶಿಲ್ಪಾ ಶೆಟ್ಟಿ

ಮುಂಬೈ: ಕೊರೊನಾದಿಂದಾಗಿ ಜನರು ಎದುರಿಸುತ್ತಿರುವ ಕಷ್ಟದ ಕುರಿತಾಗಿ ಮಾತನಾಡುತ್ತಾ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭಾವುಕರಾಗಿದ್ದಾರೆ.

ಕೊರೊನಾ ಪರಿಸ್ಥಿತಿ ಹೇಳಲಾರದಷ್ಟು ಕಠೋರವಾಗಿದೆ. ಪುಟ್ಟ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗುತ್ತಿರುವ ಹಾಗೂ ಅದೆಷ್ಟೊ ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡು ದುಃಖಿಸುತ್ತಿರುವ ದೃಶ್ಯಗಳನ್ನು ನೋಡಲು ಆಗುತ್ತಿಲ್ಲ. ಕೊನೆ ಪಕ್ಷ ನಮ್ಮ ಪ್ರೀತಿ ಪಾತ್ರರ ಅಂತಿಮ ಸಂಸ್ಕಾರಕ್ಕೆ ನಾವು ಹೋಗದಷ್ಟು ಕೆಟ್ಟ ಪರಿಸ್ಥಿತಿ ಬಂದೊದಗಿದೆ ಎಂದು ಶಿಲ್ಪಾ ಶೆಟ್ಟಿ ನೋವಿನಿಂದ ಹೇಳಿರುವ ಒಂದು ವೀಡಿಯೋವನ್ನು ಇನ್‍ಸ್ಟ್ರಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾ ದಿಂದ ಮಾತ್ರ ನಾವು ನಮ್ಮವರನ್ನು ಕಳೆದುಕೊಳ್ಳುತ್ತಿಲ್ಲ. ಆಕ್ಸಿಜನ್ ಕೊರತೆಯಿಂದಲೂ ಕಳೆದುಕೊಳ್ಳುತ್ತಿದ್ದೇವೆ. ಹಸಿವಿನಿಂದ ಜನಸಾಯುತ್ತಿದ್ದಾರೆ. ನಾವು ನಮ್ಮ ಕೈಲಾದಷ್ಟು ಸಹಾಯ ಮಾಡಬೇಕಿದೆ. ಹಸಿದ ಹೊಟ್ಟೆಗಳಿಗೆ ಅನ್ನ ಹಾಕಿ. ನಾನು ಕೂಡ ನನ್ನ ಚಾರಿಟೇಬಲ್ ಟ್ರಸ್ಟ್ ಮೂಲಕವಾಗಿ ಆಹಾರದ ವ್ಯವಸ್ಥೆ ಮಾಡಿದ್ದೇನೆ. ಇದು ನನ್ನ ಅಳಿಲು ಸೇವೆ ಆಗಿದೆ.

ಚಿತ್ರರಂಗದ ನನ್ನ ಸ್ನೇಹಿತರೂ ಮುಂದೆ ಬಂದು ಸಹಾಯ ಮಾಡಿ. ಈಗಾಗಲೇ ಸಾಕಷ್ಟು ಜನರು ನಮ್ಮ ಜನರ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಅವರ ಜೊತೆಗೆ ಕೈ ಜೋಡಿಸಿ ಎಂದು ಹೇಳುತ್ತಾ ಶಿಲ್ಪಾ ಶೆಟ್ಟಿ ದುಃಖಿತರಾಗಿದ್ದಾರೆ.

Comments

Leave a Reply

Your email address will not be published. Required fields are marked *