ಹರಾಮಿ ದುಡ್ಡು ಸಿಗದಂತೆ ಕಾನೂನು ಮಾಡಬೇಕು: ಡ್ರಗ್ಸ್ ಮಾಫಿಯಾ ವಿರುದ್ಧ ಬಿದರಿ ಬೇಸರ

ನೆಲಮಂಗಲ: ಚಿತ್ರರಂಗದ ಕೆಲ ನಟಿಯರು ಡ್ರಗ್ ವಿಚಾರದಲ್ಲಿ ಭಾಗಿಯಾಗಿರುವುದಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಇಂದು ಖಾಸಗಿ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಹರಾಮಿ ದುಡ್ಡು ಸಿಗುವವರು ಈ ರೀತಿಯ ಉದ್ಯೋಗ ಮಾಡುತ್ತಾರೆ. ಹೀಗಾಗಿ ಈ ಹರಾಮಿ ದುಡ್ಡು ಸಿಗದಂತೆ ಕಾನೂನು ಬಿಗಿಗೊಳಿಸಬೇಕು. ಪ್ರಮಾಣಿಕವಾಗಿ ದುಡಿಯುವವರಿಗೆ ಪ್ರೋತ್ಸಾಹ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ನ್ಯಾಯವನ್ನು ಕಾಪಾಡಬೇಕಿದೆ ಎಂದರು.

ತಪ್ಪು, ಅನ್ಯಾಯ, ಲಂಚ ಸುಲಿಗೆ ಮಾಡುವವರಿಗೆ ಅತ್ಯಂತ ಕಠಿಣವಾದ ಶಿಕ್ಷೆಯ ವ್ಯವಸ್ಥೆ ತರಬೇಕು. ಮೊದಲು ಕೂಡ ನಮ್ಮ ದೇಶದಲ್ಲಿ ಡ್ರಗ್ಸ್ ದಂಧೆ ಇತ್ತು ಆದರೆ ಈಗ ಹೆಚ್ಚಾಗಿದೆ. ಜನರಿಗೆ ಕಾನೂನಿನ ಮೇಲೆ ಭಯ ಇಲ್ಲದಾಗಿದೆ. ಆದ್ದರಿಂದ ಇವೆಲ್ಲಾ ಹಾಗುತ್ತಿದೆ. ನಮ್ಮ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರೆ ಇದನ್ನೆಲ್ಲಾ ಮಟ್ಟಹಾಕುತ್ತಾರೆ ಎಂದು ತಿಳಿಸಿದರು.

ರಾಜಕೀಯ, ಸಿನಿಮಾ, ನಾಟಕ ಮಾಡುವವರಿಗೆ ಪ್ರೋತ್ಸಾಹ ಮಾಡುವುದು ಕಲಿಯುಗದ ಧರ್ಮ. ನಿಜವಾದ ಹೀರೋಗಳು ನಮ್ಮ ದೇಶ ಕಾಯುವ ಸೈನಿಕರು ಹಾಗೂ ಹೊಲದ ಕೆಲಸ ಮಾಡುವ ರೈತರು ಮತ್ತು ಪೊಲೀಸರು. ನಾಟಕದಲ್ಲಿ ಡೈರೆಕ್ಟರ್ ಹೇಳಿದಂತೆ ನಟನೆ ಮಾಡುವವರು ಹೀರೋಗಳಲ್ಲ. ಅವರಿಗೆ ಒಮ್ಮೆ ಸ್ನಾನ ಮಾಡಿಸಿ ನೋಡಿ ಎಲ್ಲ ಅರ್ಥವಾಗುತ್ತೆ ಎಂದು ಡ್ರಗ್ಸ್ ದಂಧೆ ಬಗ್ಗೆ ಮಾರ್ಮಿಕವಾಗಿ ಶಂಕರ್ ಬಿದಿರಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವೇಳೆ ನೆಲಮಂಗಲದ ಜನರಿಗೆ ಉಚಿತವಾಗಿ ನಿತ್ಯಾ ಸಂಸ್ಥೆಯ ಮಾಲೀಕ ಕುಮಾರ್ ನೇತೃತ್ವದಲ್ಲಿ ಮಾಸ್ಕ್ ಗಳನ್ನು ವಿತರಿಸಿದರು.

Comments

Leave a Reply

Your email address will not be published. Required fields are marked *