ಹನಿಮೂನ್‍ಗೆ ತೆರಳಿ ಜೈಲು ಸೇರಿದ ದಂಪತಿ

-ಸಂಬಂಧಿಕರಿಂದ ಗಿಫ್ಟ್ ಪಡೆದಿದ್ದೇ ಮುಳುವಾಯ್ತು

ಮುಂಬೈ: ಹನಿಮೂನ್‍ಗೆ ತೆರಳಿದ್ದ ದಂಪತಿ ಕತಾರ್ ನಲ್ಲಿ ಜೈಲು ಸೇರಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮುಂಬೈ ಮೂಲದ ಪ್ರವೀಣ್ ಕೌಸರ್ ಒಂದು ವರ್ಷದ ಹಿಂದೆ ತನ್ನ ಮಗಳ ಒನಿಬಾಗಳಿಗೆ ಶರೀಕ್‍ರೊಂದಿಗೆ ವಿವಾಹ ಮಾಡಿದ್ದರು. ಮದುವೆ ಬಳಿಕ ಮುಂಬೈನಲ್ಲೇ ನೆಲೆಸಿದ್ದ ದಂಪತಿ ಸುಖ ಸಂಸಾರ ನಡೆಸುತ್ತಿದ್ದರು. ಇತ್ತ ಒನಿಬಾ ಮದುವೆಯಾದ ಬಳಿಕ ಗರ್ಭಿಣಿಯಾಗಿದ್ದಳು, ಈ ವೇಳೆ ಅವರ ಸಂಬಂಧಿಕರು ತಡವಾಗಿ ಮದುವೆಯ ಉಡುಗೊರೆಯಾಗಿ ಕತಾರ್ ಗೆ ಹನಿಮೂನ್ ಟಿಕೆಟ್ ನೀಡಿದ್ದರು.

ಸಂಬಂಧಿಕರಿಂದ ಟಿಕೆಟ್ ಪಡೆದು 2019ರ ಜುಲೈನಲ್ಲಿ 6 ರಂದು ಒನಿಬಾ, ಶರೀಕ್ ದಂಪತಿ ಕತಾರ್ ಗೆ ಹನಿಮೂನ್‍ಗೆ ತೆರಳಿದ್ದರು. ಆದರೆ ಅಲ್ಲಿನ ಹಮದ್ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಬಂದಿಳಿದ ವೇಳೆ ದಂಪತಿಯ ಲಗೇಜ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ 4 ಕೆಜಿ ಮಾದಕ ವಸ್ತು ಪತ್ತೆಯಾಗಿತ್ತು.

ಮಾದಕ ವಸ್ತು ಸಗಾಣೆ ಪ್ರಕರಣದಲ್ಲಿ ದಂಪತಿಯನ್ನು ಬಂಧಿಸಿದ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಪ್ರಕರಣದಲ್ಲಿ ನ್ಯಾಯಾಲಯ ದಂಪತಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ. ದಂಡ ವಿಧಿಸಿದ್ದರು. ಆದರೆ ದಂಪತಿಗೆ ಅವರ ಸಂಬಂಧಿ ತಬಸ್ಸುಮ್ ಲಗೇಜ್ ನೀಡಿದ್ದರು. ಈ ವೇಳೆ ಬ್ಯಾಗ್‍ನಲ್ಲಿ ತಂಬಾಕು ಇದೆ. ಕತಾರ್ ನಲ್ಲಿರುವ ಸಂಬಂಧಿಕರಿಗೆ ನೀಡಲು ತಿಳಿಸಿದ್ದರು. ಇದನ್ನೇ ನಂಬಿದ್ದ ದಂಪತಿ ಮೋಸ ಹೋಗಿ ಜೈಲು ಸೇರಿದ್ದರು.

ಪ್ರಕರಣ ಸಂಬಂಧ ಕಳೆದ ಒಂದು ವರ್ಷದಿಂದ ವಿಚಾರಣೆ ನಡೆಸಿದ ಮುಂಬೈ ಪೊಲೀಸರು ಹಾಗೂ ಎನ್‍ಸಿಬಿ ಸದ್ಯ ಬಂಧಿತ ದಂಪತಿಗಳಿಗೆ ಅವರ ಸಂಬಂಧಿ ತಬಸ್ಸುಮ್ ಮೋಸ ಮಾಡಿರುವುದನ್ನು ಖಚಿತ ಪಡಿಸಿದ್ದಾರೆ. ಎನ್‍ಸಿಬಿ ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ, ಪ್ರಕರಣದಲ್ಲಿ ಮುಂಬೈ ಪೊಲೀಸರು ತಬಸ್ಸುಮ್ ಹಾಗೂ ಆಕೆಯ ಆಪ್ತ ನಿಜಾಮ್ ಕಾರಾ ಎಂಬಾತನನ್ನು ಸೆಪ್ಟೆಂಬರಿನಲ್ಲಿ ಬಂಧಿಸಿದ್ದು, ಬಂಧಿತರಿಂದ 13 ಗ್ರಾಂ ಕೊಕೇನ್‍ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಮಧ್ಯ ಪ್ರಾಚ್ಯ ರಾಷ್ಟ್ರಗಳ ಡ್ರಗ್ ಪೆಡ್ಲರ್ ಗಳೊಂದಿಗೆ ಬಂಧಿತರು ಲಿಂಕ್ ಹೊಂದಿರುವುದು ಬಹಿರಂಗವಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ ಎನ್‍ಸಿಬಿ ಅಧಿಕಾರಿಗಳು ಕತಾರ್ ನ ಅಧಿಕಾರಿಗಳನ್ನು ಸಂಪರ್ಕಿಸಿದ್ದು, ಬಂಧಿತ ದಂಪತಿಯ ಬಿಡುಗಡೆ ಮಾಡಿಸುವ ಪ್ರಯತ್ನದಲ್ಲಿದ್ದಾರೆ. ತಮ್ಮ ಮಕ್ಕಳನ್ನು ಜೈಲಿನಿಂದ ಬಿಡುಗಡೆಗೊಳಿಸಲು ಹೋರಾಟ ಮಾಡಿರುವ ಕುಟುಂಬಸ್ಥರು ಸದ್ಯ ನ್ಯಾಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಈ ನಡುವೆ ಮಾರ್ಚ್‍ನಲ್ಲಿ ಒನಿಬಾ ಜೈಲಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಜೈಲಿನ ಅಧಿಕಾರಿಗಳು ಕುಟುಂಬಸ್ಥರಿಗೆ ತಮ್ಮ ಪುತ್ರಿಯೊಂದಿಗೆ ಮಾತನಾಡಲು ಅವಕಾಶ ನೀಡಿದ್ದು, 2 ಬಾರಿ ಮಾತುಕತೆ ನಡೆಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರವೀಣ್ ಕೌಸರ್, ಸದ್ಯ ನಮ್ಮ ಜೀವನದಲ್ಲಿ ಮೂಡಿದ್ದ ಕಪ್ಪು ಮೋಡಗಳು ದೂರವಾಗುತ್ತಿದ್ದು, ಕತಾರ್ ನ ಅಧಿಕಾರಿಗಳು ನಮ್ಮ ಮಕ್ಕಳನ್ನು ತವರಿಗೆ ವಾಪಸ್ ಕಳುಹಿಸುವ ಭರವಸೆ ಇದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *