ಹಗಲಿರುಳು ಶ್ರಮಿಸ್ತಿರೋ ವೈದ್ಯರು, ದಾದಿಯರಲ್ಲಿ ದೇವರನ್ನ ಕಂಡೆ: ನಳಿನ್ ಗುಣಮುಖ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೊರೊನಾದಿಂದ ಗುಣಮುಖರಾಗಿದ್ದು, ಸದ್ಯ ಕ್ವಾರಂಟೈನ್‍ನಲ್ಲಿದ್ದಾರೆ.

ನಳಿನ್ ಕುಮಾರ್ ಅವರಿಗೆ ಆಗಸ್ಟ್ 30 ರಂದು ಕೊರೊನಾ ಪಾಸಿಟಿವ್ ದೃಢವಾಗಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಕೊರೊನಾದಿಂದ ಗುಣಮುಖರಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

“ಕಟೀಲು ದುರ್ಗಾಪರಮೇಶ್ವರಿ ದೇವಿಯ ಕೃಪೆ, ನಿಮ್ಮೆಲ್ಲರ ಪ್ರೀತಿ, ಹಾರೈಕೆಯ ಫಲವಾಗಿ ಕೊರೊನಾ ಕಾಯಿಲೆಯಿಂದ ಗುಣಮುಖನಾಗಿದ್ದೇನೆ. ಸದ್ಯ ಕೆಲವು ದಿನಗಳ ತನಕ ಕ್ವಾರಂಟೈನ್‍ನಲ್ಲಿ ಇರಲು ವೈದ್ಯರು ಸಲಹೆ ನೀಡಿದ್ದಾರೆ” ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.

ಮೊತ್ತೊಂದು ಟ್ವೀಟ್ ಮಾಡಿದ್ದು, “ನಾನು ಭಗವಂತನನ್ನು ಕಣ್ಣಾರೆ ನೋಡಿದವನಲ್ಲ. ಆದರೆ ತಮ್ಮ ಅಮೂಲ್ಯ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರಲ್ಲಿ, ದಾದಿಯರಲ್ಲಿ, ಆರೋಗ್ಯ ಸಿಬ್ಬಂದಿಯಲ್ಲಿ ದೇವರನ್ನು ಕಂಡೆ” ಎಂದು ವೈದ್ಯರು, ದಾದಿಯರಿಗೆ ಧನ್ಯವಾದ ತಿಳಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡುವ ಮೂಲಕ ತಮಗೆ ಕೊರೊನಾ ಪಾಸಿಟಿವ್ ಆಗಿರುವುದನ್ನು ತಿಳಿಸಿದ್ದರು. “ನಾನು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಿಮ್ಮ ಶುಭಾಶಯಗಳು ಮತ್ತು ಆಶೀರ್ವಾದಗಳೊಂದಿಗೆ ಶೀಘ್ರದಲ್ಲೇ ಹಿಂತಿರುಗುವ ವಿಶ್ವಾಸವಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಜಾಗರೂಕರಾಗಿರಿ” ಎಂದು ನಳಿನ್ ಕುಮಾರ್ ಅವರು ಮನವಿ ಮಾಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *