ಸ್ಯಾಂಡಲ್‍ವುಡ್ ಡ್ರಗ್ಸ್ ಡೀಲ್-ಆರೋಪಿ ವೀರೇನ್ ಖನ್ನಾ ಜತೆ 50 ಲಕ್ಷ ಡೀಲ್‍ನಲ್ಲಿ ಎಸಿಪಿ!

-ಸಿಸಿಬಿಯೊಳಗೆ ಡ್ರಗ್ಸ್ ಘಾಟಿನ ಝಣ ಝಣ ಕಾಂಚಾಣ?
-ಸಿಸಿಬಿಯ ಎಸಿಪಿ, ಹೆಡ್ ಕಾನ್‍ಸ್ಟೇಬಲ್ ಅಮಾನತು

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಘಾಟಿನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಯಲ್ಲಿ ಝಣ ಝಣ ಕಾಂಚಾಣದ ಸದ್ದು ಕೇಳಿ ಬಂದಿದೆ. ಸಂಸ್ಥೆಗೆ ವಿಶ್ವಾಸಾರ್ಹತೆಗೆ ಧಕ್ಕೆಯುಂಟು ಮಾಡಿದ್ದರಿಂದ ಎಸಿಪಿ ಮತ್ತು ಮುಖ್ಯಪೇದೆಯನ್ನ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಎಂ.ಆರ್.ಮುಧವಿ ಮತ್ತು ಮುಖ್ಯಪೇದೆ ಮಲ್ಲಿಕಾರ್ಜುನ್ ಅಮಾನತುಗೊಂಡ ಸಿಸಿಬಿ ಸಿಬ್ಬಂದಿ. ಮಲ್ಲಿಕಾರ್ಜುನ್ ಮತ್ತು ಮುಧವಿ ವಿರುದ್ಧ ಮಾದಕ ವಸ್ತು ಮಾರಾಟ, ಸಾಗಾಣಿಕೆ, ಸೇವನೆ ಪ್ರಕರಣಗಳ ತನಿಖೆಗೆ ಸಂಬಂಧಪಟ್ಟ ಮಾಹಿತಿಯನ್ನು ಆರೋಪಿಗಳ ಕಡೆಯವರಿಗೆ ಸೋರಿಕೆ ಮಾಡಿದ್ದಾರೆ. ಹೀಗಾಗಿ ತನಿಖೆಗೆ ಹಿನ್ನೆಡೆ ಆಗಿದ್ದರಿಂದ ಇಬ್ಬರನ್ನು ಅಮಾನತುಗೊಳಿಸಲಾಗಿದೆ.

ಡ್ರಗ್ಸ್ ಪ್ರಕರಣದ ಪ್ರಮುಖ ಎ1 ಆರೋಪಿ ವೀರೇನ್ ಖನ್ನಾ ಜೊತೆ ಎಸಿಪಿ ಎಂ.ಆರ್.ಮುಧವಿ 50 ಲಕ್ಷ ರೂ. ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಎಸಿಪಿಗೆ ಮುಖ್ಯಪೇದೆ ಸಹ ಸಾಥ್ ನೀಡಿದ್ದಾರೆ. ವಿಚಾರಣೆ ವೇಳೆ ಮಲ್ಲಿಕಾರ್ಜುನ್ ಕೈಯಲ್ಲಿ ಮೊಬೈಲ್ ಕೊಟ್ಟು ಮುಧವಿ ಕಳುಹಿಸಿದ್ದರು ಎನ್ನಲಾಗಿದೆ. ಪ್ರಕರಣದಿಂದ ವೀರೇನ್ ಖನ್ನಾನನ್ನು ಬಚಾವ್ ಮಾಡಲು 50 ಲಕ್ಷ ರೂ.ಗೆ ಡೀಲ್ ಫಿಕ್ಸ್ ಆಗಿರುವ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತ ಎರಡನೇ ಬಾರಿ ದೂದ್ ಪೇಡಾ ದಿಗಂತ್ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಈ ಹಿಂದೆ ಪತ್ನಿ ಐಂದ್ರಿತಾ ರೇ ಅವರನ್ನ ಸಿಸಿಬಿ ವಿಚಾರಣೆಗೆ ಒಳಪಡಿಸಿತ್ತು. ಪ್ರಕರಣದ ಮತ್ತೋರ್ವ ಆರೋಪಿ ಚಿನ್ನದ ವ್ಯಾಪಾರಿ ವೈಭವ್ ಜೈನ್ ಜೊತೆ ಸಂಪರ್ಕದಲ್ಲಿದ್ದ ನಿರೂಪಕರಾದ ಅಕುಲ್ ಬಾಲಾಜಿ ಮತ್ತು ಸಂತೋಷ್ ಕುಮಾರ್ ಸಹ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ.

Comments

Leave a Reply

Your email address will not be published. Required fields are marked *