ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ಮಾಪಕ ಕೆ ಮಂಜು ವಿರುದ್ಧ ಹಣ ವಂಚನೆ ಆರೋಪ

ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಿರ್ಮಾಪಕ ಕೆ ಮಂಜು ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಈ ಸಂಬಂಧ ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ತಾರಾ ಅಭಿನಯದ ಹೆಬ್ಬೆಟ್ಟು ರಾಮಕ್ಕ ಚಿತ್ರದ ನಿರ್ಮಾಪಕ ಎಸ್.ಎ ಪುಟ್ಟರಾಜು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 420, 506 ಮತ್ತು 34 ಅಡಿಯಲ್ಲಿ ದೂರು ದಾಖಲಾಗಿದೆ.

ಎಫ್‍ಐಅರ್ ನಲ್ಲಿ ಕೆ. ಮಂಜು ಎರಡನೇ ಆರೋಪಿ. ರಾಜಗೋಪಾಲ್ ಬಿ.ಎಂ, ರಮೇಶ್ ಬಾಬು, ವಿಜಯಲಕ್ಷ್ಮಿ ಕೂಡ ಆರೋಪಿಗಳಾಗಿದ್ದಾರೆ. ಕೆ. ಮಂಜು ವಿರುದ್ಧ 1 ಕೋಟಿ 10.5 ಲಕ್ಷ ಹಣ ಪಡೆದಿವ ಆರೋಪ ಕೇಳಿಬಂದರೆ, ಮತ್ತೊಬ್ಬ ಆರೋಪಿ ರಾಜಗೋಪಾಲ್ 68 ಲಕ್ಷ ಹಣ ಪಡೆದಿದ್ದಾರೆ ಎಂದು ಪುಟ್ಟರಾಜು ತಮ್ಮ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

2018 ರಲ್ಲಿ ಆರೋಪಿ ರಾಜಗೋಪಾಲ್ ಹೊಸಕೋಟೆ (ತಾ) ಸೊಣ್ಣೇನಹಳ್ಳಿ (ಗ್ರಾ) ಸರ್ವೆ ನಂ 7/3 ರ 18.3/4 ಗುಂಟೆ ತನ್ನ ಜಮೀನು ಮಾರುತ್ತಿದ್ದರಂತೆ. ದೂರುದಾರ ಪುಟ್ಟರಾಜು ಅವರು ಆರ್ಟಿಜಿಎಸ್ ನಲ್ಲಿ ಹಣ ನೀಡಿದ್ದಾರಂತೆ. ಮೊದಲು ಎ1 ಆರೋಪಿ ರಾಜಗೋಪಾಲ್ ಗೆ ಆಡ್ವಾನ್ಸ್ ನೀಡಿದ್ದರಂತೆ. ಆದರೆ ಅಷ್ಟರಲ್ಲಿ ಕೆ. ಮಂಜು ತಾನು ಅಗ್ರಿಮೆಂಟ್ ಮಾಡಿಕೊಂಡಿದ್ದರಂತೆ. ಬಳಿಕ 4 ಮಂದಿ ಸೇರಿ ರಿಜಿಸ್ಟರ್ ಮಾಡಿಕೊಡುವುದಾಗಿ ಹೇಳಿ ಹಣ ಪಡೆದಿದ್ದರಂತೆ. ಆದರೆ 2018ರಲ್ಲೆ ಹಣ ಪಡೆದಿದ್ದರೂ ವಾಪಸ್ ನೀಡದೇ ವಂಚನೆ ಮಾಡಿದ್ದಾರೆ. ಅಲ್ಲದೆ ಈ ಹಣದ ಬಗ್ಗೆ ಮಾತನಾಡಿದ್ರೆ ಬೇರೆ ರೀತಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪುಟ್ಟರಾಜು ಆರೋಪಿಸಿದ್ದಾರೆ.

ಸದ್ಯ ಮಹದೇವಪುರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *