ಸ್ನೇಹಿತರ ಜೊತೆ ಪ್ರವಾಸ – ಆಳದ ಅರಿವಿಲ್ಲದೆ ಜಲಪಾತಕ್ಕಿಳಿದ ಯುವಕ ಸಾವು

ಚಿಕ್ಕಮಗಳೂರು: ಆಳದ ಅರಿವಿಲ್ಲದೆ ಜಲಪಾತದ ನೀರಿಗಿಳಿದ ಯುವಕ ಸಾವನಪ್ಪಿರು ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಅಬ್ಬುಗುಡಿಗೆ ಗ್ರಾಮದ ಸುರಮನೆ ಜಲಪಾತದಲ್ಲಿ ನಡೆದಿದೆ.

ಮೃತ ಯುವಕನನ್ನು 16 ವರ್ಷದ ವಂಶಿತ್ ಎಂದು ಗುರುತಿಸಲಾಗಿದೆ. ಮೃತ ವಂಶಿತ್ ಮೂಲತಃ ಕಳಸದ ಸಂಸೆ ಸಮೀಪದ ಗುತ್ಯಡ್ಕ ಗ್ರಾಮದವನು. ವಂಶಿತ್ ಗ್ರಾಮದ ನಾಲ್ಕೈದು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಆಳದ ಅರಿವಿರದ ಕಾರಣ ಜಲಪಾತದಲ್ಲಿ ಆಟವಾಡುವಾಗ ನೀರಲ್ಲಿ ಮುಳುಗಿ ವಂಶಿತ್ ಸಾವನ್ನಪ್ಪಿದ್ದಾನೆ.

ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿದಿರೋದ್ರಿಂದ ನೀರಿನ ರಭಸಕ್ಕೆ ಜಲಪಾತದ ಬಳಿ ಆಳವಾದ ನೀರಿನ ಗುಂಡಿ ನಿರ್ಮಾಣವಾಗಿರುವ ಶಂಕೆ ವ್ಯಕ್ತವಾಗಿದೆ. ಮಳೆಗಾಲದಲ್ಲಿ ನಿರ್ಮಾಣವಾಗಿರುವ ಗುಂಡಿಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದೆ ಯುವಕರು ನೀರಿಗಿಳಿದಾಗ ಈ ದುರ್ಘಟನೆ ಸಂಭವಿಸಿದೆ. ಪ್ರವಾಸಿಗರಿಗೆ ಅಷ್ಟಾಗಿ ಗೊತ್ತಿಲ್ಲದ ಈ ಸುಂದರ ತಾಣ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರಿಗೆ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

ಫಾಲ್ಸ್ ಕೆಳಗೆ ಸುಮಾರು ಹತ್ತರಿಂದ ಹನ್ನೆರಡು ಅಡಿ ನೀರಿದ್ದು, ಆಳವನ್ನು ಲೆಕ್ಕಿಸದೇ ನೀರಿನಲ್ಲಿ ಇಳಿದಿದ್ದರಿಂದ ವಂಶಿತ್ ಮುಳುಗಿದ್ದಾನೆ. ಈ ವೇಳೆ ಮೇಲೆ ಬರಲು ಪ್ರಯತ್ನಿಸಿದರು ಪ್ರಯೋಜನವಾಗಿಲ್ಲ. ಸ್ನೇಹಿತರ ಕಣ್ಣೆದುರೇ ಯುವಕ ಸಾವನ್ನಪ್ಪಿದ್ದಾನೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *