ಸ್ನೇಹಿತರ ಜೊತೆ ಟ್ರಿಪ್ – ಈಜಲು ಫಾಲ್ಸ್‌ಗೆ ಧುಮುಕಿದವ ನೀರುಪಾಲು

– ಯುವಕ ನೀರಿನಲ್ಲಿ ಮುಳುಗುವ ದೃಶ್ಯ ಮೊಬೈಲ್‍ನಲ್ಲಿ ಸೆರೆ

ಮಂಡ್ಯ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು ಫಾಲ್ಸ್ ನಲ್ಲಿ ಜರುಗಿದೆ.

ಬೆಂಗಳೂರಿನ ಸಂಜಯ್ (22) ಮೃತ ದುರ್ದೈವಿ ಯುವಕ. ಬೆಂಗಳೂರಿನಿಂದ ತನ್ನ ನಾಲ್ಕು ಮಂದಿ ಸ್ನೇಹಿತರೊಂದಿಗೆ ಬೈಕಿನಲ್ಲಿ ಇಂದು ಪಿಕ್‍ನಿಕ್‍ಗೆ ಬಂದಿದ್ದಾರೆ. ಸಾಕಷ್ಟು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ್ದ ಈ ಯುವಕರ ತಂಡ ಅಂತಿಮವಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗಾಣಾಳು (ಬೆಂಕಿ) ಫಾಲ್ಸ್ ಗೆ ಬಂದಿದ್ದಾರೆ.

ಕೆಲ ಕಾಲ ಫಾಲ್ಸ್ ಬಳಿ ನಿಂತು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ನಂತರ ಸಂಜಯ್ ಈಜು ಹೊಡೆಯಲು ಫಾಲ್ಸ್ ನೀರಿಗೆ ಧುಮುಕಿದ್ದಾನೆ. ಈ ವೇಳೆ ಆತನ ಸ್ನೇಹಿತರು ಈಜು ಹೊಡೆಯುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವೇಳೆ ನೀರಿನಲ್ಲಿ ಸುಸ್ತಾದ ಕಾರಣ ಸಂಜಯ್‍ಗೆ ಈಜಾಡಾಲು ಸಾಧ್ಯವಾಗಿಲ್ಲ. ಹೀಗಾಗಿ ಸಂಜಯ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ದೃಶ್ಯ ಸ್ನೇಹಿತರ ಮೊಬೈಲ್‍ನಲ್ಲಿ ಸೆರೆಯಾಗಿದೆ.

ಈ ವಿಷಯ ತಿಳಿದ ಪೋಷಕರು ಕೂಡಲೇ ಮಳವಳ್ಳಿ ತಾಲೂಕು ಆಸ್ಪತ್ರೆಗೆ ಬಂದಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಯ ಬಳಿಕ ಸಂಜಯ್ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *