ಸೋಂಕು ಹೆಚ್ಚಾಗ್ತಿದ್ರೂ ಎಚ್ಚೆತ್ತುಕೊಳ್ಳದ ಹಾಸನ ಜಿಲ್ಲಾಡಳಿತ

– ಜನತೆಗೂ ಕೊರೊನಾ ಬಗ್ಗೆ ಇಲ್ಲ ಕಿಂಚಿತ್ತೂ ಭಯ

ಹಾಸನ: ಜಿಲ್ಲೆಯಲ್ಲಿ ಕೊರೊನಾ ನಿಧಾನವಾಗಿ ವೇಗ ಪಡೆದುಕೊಳ್ತಿದೆ. ಆದರೆ ಜನತೆ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕೊರೊನಾ ನಿಯಮಗಳನ್ನ ಪಾಲನೆ ಮಾಡುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಮಂಗಮಾಯವಾಗಿದ್ರೆ, ಜನತೆ ಮಾಸ್ಕ್ ಧರಿಸೋದನ್ನೇ ಮರೆತಿದ್ದಾರೆ. ಅತ್ತ ಜಿಲ್ಲಾಡಳಿತ ನಮ್ಗೆ ಸಂಬಂಧನೇ ಇಲ್ಲ ಎಂಬಂತಿದ್ದಾರೆ.

ಹೌದು. ಹಾಸನ ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದೆ. ಆದರೆ ಜಿಲ್ಲಾಡಾಳಿತ ಕಾಟಾಚಾರಕ್ಕೆ ಎಂಬಂತೆ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದೆ. ಜನತೆ ಕೊರೊನಾ ನಿಯಮಗಳನ್ನ ಉಲ್ಲಂಘನೆ ಮಾಡ್ತಿದ್ರೂ, ಜಿಲ್ಲಾಡಳಿತ ಜಾಣ ಕುರುಡುತನ ಪ್ರದರ್ಶನ ಮಾಡ್ತಿದೆ.

ಜಿಲ್ಲೆಯಲ್ಲಿ ಬಹುತೇಕ ಮಂದಿ ಮಾಸ್ಕ್ ಧರಿಸ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡ್ತಿಲ್ಲ. ಜನತೆಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿ, ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿರುವ ಅಧಿಕಾರಿಗಳು ಅದ್ಯಾಕೋ ಮೌನವಾಗಿದ್ದಾರೆ. ಬೆಂಗಳೂರಿನಿಂದ ನಿತ್ಯ ಸಾವಿರಾರು ಜನರು ಹಾಸನಕ್ಕೆ ಬಂದು ಹೋಗ್ತಿದ್ದು ಸೋಂಕು ಮತ್ತಷ್ಟು ಹೆಚ್ಚಾಗುವ ಆತಂಕ ಕಾಡ್ತಿದೆ.

ಸದ್ಯ ಜಿಲ್ಲಾಡಳಿತ ಕೊರೊನಾ ತಡೆಗೆ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕಿ ಹೊಂದಿರುವವರನ್ನ ಗುರುತಿಸಿ ಪರೀಕ್ಷಿಗೆ ಒಳಪಡಿಸ್ತಿದೆ. ಜ್ವರ, ಕೆಮ್ಮು, ಶೀತ ಹೀಗೆ ರೋಗ ಲಕ್ಷಣ ಇರುವವರನ್ನು ಗುರುತಿಸಿ ಅವರಿಗೆ ಪ್ರತಿದಿನ ಕೊರೋನ ಚೆಕ್ ಮಾಡ್ತಿದ್ದಾರೆ. ಹೊರರಾಜ್ಯದಿಂದ ಬರುವವರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಲಾಗಿದೆ. ಆದ್ರೆ ಸ್ಥಳೀಯರಿಂದಲೇ ಸೋಂಕು ಹರಡುತ್ತಿದ್ರೂ ಕ್ರಮ ಕೈಗೊಳ್ಳದಿರೋದು ವಿಪರ್ಯಾಸ.

Comments

Leave a Reply

Your email address will not be published. Required fields are marked *