ಸುಶಾಂತ್ ಕೇಸ್- ಪೊಲೀಸರಿಂದ ಕಂಗನಾ ವಿಚಾರಣೆ

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಬೆನ್ನಟ್ಟಿರುವ ಮುಂಬೈ ಪೊಲೀಸರು ಇದುವರೆಗೂ 38ಕ್ಕೂ ಅಧಿಕ ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದೀಗ ನಟಿ ಕಂಗನಾ ರಣಾವತ್ ಸಹ ಪೊಲೀಸ್ ವಿಚಾರಣೆಗೆ ಹಾಜರಾಗಲಿದ್ದಾರೆ.

ಜುಲೈ 14ರಂದು ಸುಶಾಂತ್ ಮುಂಬೈನ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ ಹುಟ್ಟಿಕೊಂಡಿದ್ದು, ಗೆಳತಿ ರಿಯಾ ಸೇರಿದಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇತ್ತ ಸುಶಾಂತ್ ನಿಧನದ ಬಳಿಕ ನಟ ಕಂಗನಾ ರಣಾವತ್, ಇದೊಂದು ಪಕ್ಕಾ ಪೂರ್ವ ಯೋಜಿತ ಕೊಲೆ ಎಂದು ಆರೋಪಿಸಿದ್ದರು. ಸುಶಾಂತ್ ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತಕ್ಕೆ ಬಲಿಯಾಗಿದ್ದಾರೆ ಎಂದು ಧ್ವನಿ ಎತ್ತಿದ್ದಾರೆ.

ಧೋನಿ ಅಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದ ಸುಶಾಂತ್ ನನ್ನು ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಪ್ಲಾಪ್ ಸ್ಟಾರ್ ಎಂದು ಕರೆದು ಅವಮಾನಿಸಿದ್ದರು. ಸುಶಾಂತ್ ನಟನೆಯ ಸಿನಿಮಾಗಳಿಗೆ ಥಿಯೇಟರ್ ಸಿಗದಂತೆ ಬಾಲಿವುಡ್ ಮಾಫಿಯಾ ಒಳಸಂಚು ಮಾಡಿತ್ತು ಎಂದು ಕಂಗನಾ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಮುಂಬೈ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಕಂಗನಾರಿಗೆ ನೋಟಿಸ್ ನೀಡಲಾಗಿದೆ.

ಕೊರೊನಾದಿಂದ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡ ಹಿನ್ನೆಲೆ ಕಂಗನಾ ಹಿಮಾಚಲ ಪ್ರದೇಶದ ತಮ್ಮ ಊರಿನಲ್ಲಿದ್ದಾರೆ. ಇತ್ತ ಪೊಲೀಸ್ ನೋಟಿಸ್ ಗೆ ಉತ್ತರಿಸಿರುವ ಕಂಗನಾ, ಮುಂಬೈಗೆ ಬಂದ ಕೂಡಲೇ ವಿಚಾರಣೆಗೆ ಹಾಜರಾಗುವುದಾಗಿ ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *