ಸುತ್ತಿಗೆಯಿಂದ ಮಗನ ತಲೆ ಜಜ್ಜಿ ಕೊಲೆಗೈದ ಪಾಪಿ ತಂದೆ

– ಗೊತ್ತಾಗದಂತೆ ಹಿಂದಿನಿಂದ ತಲೆಗೆ ಹೊಡೆದು ಕೊಲೆ

ಹೈದರಾಬಾದ್: ತಂದೆಯೇ ತನ್ನ 40 ವರ್ಷದ ಮಗನನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ವಿಶಾಖಪಟ್ಟಣಂನಲ್ಲಿ ಘಟನೆ ನಡೆದಿದ್ದು, ರೊಚ್ಚಿಗೆದ್ದ ತಂದೆ ಸುತ್ತಿಗೆಯನ್ನು ತೆಗೆದುಕೊಂಡು ತನ್ನ ಮಗನ ತಲೆಗೆ ಹಲವು ಬಾರಿ ಸಿಟ್ಟಿನಿಂದ ಬಾರಿಸುವ ಮೂಲಕ ಹತ್ಯೆ ಮಾಡಿದ್ದಾರೆ. ಆರೋಪಿಯನ್ನು ವೀರ ರಾಜು ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಂದೆ ಮಗನನ್ನೇ ಕೊಲೆ ಮಾಡಿದ್ದಾನೆ.

ಮನೆಯ ಕಾರ್ ಪಾರ್ಕಿಂಗ್ ಏರಿಯಾದಲ್ಲಿ ಘಟನೆ ನಡೆದಿದ್ದು, ಸುತ್ತಿಗೆಯಲ್ಲಿ ಹೊಡೆಯುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗ ಸ್ಟೂಲ್ ಮೇಲೆ ಕುಳಿತಿರುವುದನ್ನು ಕಂಡ ತಂದೆ, ಮನಗೆ ಮರಳಿದ್ದು, ಬಳಿಕ ಸುತ್ತಿಗೆ ತೆಗೆದುಕೊಂಡು ಬಂದಿದ್ದಾನೆ. ಮಗನ ಹಿಂದೆ ತೆರಳಿ, ಅವನಿಗೆ ತಿಳಿಯದಂತೆ ಹಿಂದಿನಿಂದಲೇ ಸುತ್ತಿಗೆಯಿಂದ ರಭಸವಾಗಿ ತಲೆಗೆ ಹೊಡೆದಿದ್ದಾನೆ.

ಹೊಡೆಯುತ್ತಿದ್ದಂತೆ ಮಗ ಪ್ರಜ್ಞಾಹೀನನಾಗಿ ಕೆಳಗೆ ಬಿದ್ದಿದ್ದು, ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಇದಾವುದನ್ನೂ ಲೆಕ್ಕಿಸದೆ ತಂದೆ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಓಡಾಡಿದ್ದಾನೆ.

ಆಸ್ತಿ ವಿಚಾರವಾಗಿ ತಂದೆ ಮಗನ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಇದು ವಿಕೋಪಕ್ಕೆತಿರುಗಿದೆ. ವೀರ ರಾಜು ಹಾಗೂ ಆತನ ಮಗ ಇಬ್ಬರೂ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಂದೆ ಕೆಲಸದಿಂದ ನಿವೃತ್ತರಾಗಿದ್ದು, ಮಗ ರಜೆಯಲ್ಲಿ ವಾರದ ಹಿಂದೆ ಮನೆಗೆ ಆಗಮಿಸಿದ್ದ.

ಆಸ್ತಿ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ತಾರಕಕ್ಕೇರಿದ್ದು, ಆಗ ವೀರ ರಾಜು ತನ್ನ ಮಗ ಜಲರಾಜು ಮೇಲೆ ದಾಳಿನ ಮಾಡಿದ್ದಾನೆ. ಸುತ್ತಿಗೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ವಿಶಾಖಪಟ್ಟಣಂ ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ವೀರರಾಜು ತಾನಾಗಿಯೇ ಶರಣಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *