ಸಿದ್ದರಾಮಯ್ಯ ಗೋಮಾಂಸ ತಿನ್ನುವಂತೆ ನಾನು ಚಾಲೆಂಜ್ ಹಾಕಿಲ್ಲ: ಪ್ರಭು ಚವ್ಹಾಣ್

ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ನನ್ನೆದುರೇ ಗೋಮಾಂಸ ತಿನ್ನಲಿ ನೋಡೋಣ ಎಂದು ಸವಾಲು ಹಾಕಿದ್ದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಈಗ ಉಲ್ಟಾ ಹೊಡೆದಿದ್ದಾರೆ.

ಚಾಮರಾಜಗರದಲ್ಲಿ ಮಾತನಾಡಿದ ಅವರು, ಗೋಮಾಂಸ ತಿನ್ನುವಂತೆ ನಾನು ಸಿದ್ದರಾಮಯ್ಯಗೆ ಚಾಲೆಂಜ್ ಮಾಡಿಲ್ಲ. ಸಿದ್ದರಾಮಯ್ಯ ಗೋಮಾಂಸ ತಿಂತೀನಿ, ತಿಂತೀನಿ ಅಂತ ಪದೇಪದೇ ಹೇಳ್ತುತ್ತಿದ್ದರು. ಅವರು ರಾಜ್ಯದ ಮಾಜಿ ಮುಖ್ಯ ಮಂತ್ರಿ, ವಿರೋಧಪಕ್ಷ ನಾಯಕ. ಹಾಗಾಗಿ ಅವರ ಹೇಳಿಕೆ ಸರಿಯಿಲ್ಲ ಎಂದು ಹೇಳಿದ್ದೇನೆ ಎಂದರು.

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕೊಡಲ್ಲ ಅಂತಾರೆ, ಆದ್ರೆ ಅವರ ಮಗ ಕೊಟ್ಟಿದ್ದಾರೆ. ತಂದೆ ಕೊಡಲ್ಲ ಅಂದ್ರೆ ಅವರ ಮಗ ಶಾಸಕ ದೇಣಿಗೆ ಕೊಟ್ಟಿದ್ದಾರೆ ಎಂದರು.

ದೇಣಿಗೆ ಕೊಡದ ಮನೆಗಳ ಮಾರ್ಕ್ ಮಾಡಲಾಗುತ್ತಿದೆ ಎಂಬ ಹೆಚ್. ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ದೊಡ್ಡ ಮನುಷ್ಯ, ನಾನು ಅವರ ಮುಂದೆ ಚಿಕ್ಕವನು. ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ವಿರೋಧ ಮಾಡಬೇಕು ಎಂಬ ಕಾರಣಕ್ಕೆ ಹೀಗೆ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ರಾಮಮಂದಿರ ದೇಣಿಗೆ ಬಗ್ಗೆ ಲೆಕ್ಕ ಕೊಟ್ಟೇ ಕೊಡುತ್ತೇವೆ. ಹಣ ನೀಡಿದವರಿಗೆ ಅಧಿಕೃತ ರಶೀತಿ ನೀಡಲಾಗುತ್ತಿದೆ. ಎಲ್ಲವೂ ಪಾರದರ್ಶಕವಾಗಿದೆ ಎಂದು ಸಚಿವರು ಸಮರ್ಥಿಸಿಕೊಂಡರು.

Comments

Leave a Reply

Your email address will not be published. Required fields are marked *