ಸಿದ್ದರಾಮಯ್ಯ ಕಣ್ಣು ಹಳದಿ ಇದೆ, ಅವರು ಹಾಗೇ ನೋಡ್ಲಿ ಬಿಡಿ: ರಮೇಶ್ ಜಾರಕಿಹೊಳಿ

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾನ್ ನಾಯಕರು ಅವರ ಬಗ್ಗೆ ಗೌರವವಿದೆ ಮಾತನಾಡಲ್ಲ. ಕಣ್ಣು ಹಳದಿ ಇದೆ ಅವರು ಹಾಗೇ ನೋಡಲಿ ಬಿಡಿ ಎಂದು ಬಿಜೆಪಿ ಅತೃಪ್ತ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ರಾಜ್ಯಸಭಾ ಟಿಕೆಟ್‍ಗಾಗಿ ಪ್ರಭಾಕರ್ ಕೋರೆ- ರಮೇಶ್ ಕತ್ತಿ ಪೈಪೋಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಅನಿಸಿಕೆ ಹೈಕಮಾಂಡ್‍ಗೆ ತಿಳಿಸಿದ್ದೇವೆ. ಅದನ್ನು ಬಹಿರಂಗವಾಗಿ ಹೇಳಕ್ಕಾಗಲ್ಲ, ಅದನ್ನು ಪಕ್ಷ ನಿರ್ಧರಿಸುತ್ತೆ. ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತೆ ಅದಕ್ಕೆ ಬದ್ಧ ಎಂದರು.

ನಮ್ಮ ಮುಖ್ಯಮಂತ್ರಿ ಚಿಕ್ಕವರಿದ್ದಾಗಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಇಂತಹದ್ದನ್ನ ಬಹಳ ಫೇಸ್ ಮಾಡಿದಾರೆ, ಸಮಸ್ಯೆ ಬಗೆಹರಿಸುತ್ತಾರೆ. ಉಮೇಶ್ ಕತ್ತಿ ಬಂಡಾಯ ಮಾಡಿಲ್ಲ ಶಾಸಕರಿಗೆ ಊಟ ಮಾಡಿಸಿದ್ದಾರೆ. ಲಾಕ್‍ಡೌನ್ ನಿಂದ ಹೋಟೆಲ್ ಬಂದ್ ಇದೆ. ಹೀಗಾಗಿ ಉಮೇಶ್ ಕತ್ತಿ ನಿವಾಸದಲ್ಲಿ ಊಟಕ್ಕೆ ಶಾಸಕರು ಸೇರಿದ್ರು ಎಂದರು.

ಈ ಮೊದಲು ಜಗದೀಶ್ ಶೆಟ್ಟರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ರು. ಆಗಲೂ ನಾನೇ ಜಿಲ್ಲಾ ಉಸ್ತುವಾರಿ ಸಚಿವನಂತೆಯೇ ಇದ್ದೆ. ಈಗ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೂ ತೊಂದರೆ ಇಲ್ಲ. ಮೂರನೇ ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಒಳ್ಳೆಯ ಸಲಹೆ ಸೂಚನೆ ಯಾರೇ ನೀಡಿದರೂ ಸ್ವೀಕಾರ ಮಾಡ್ತೇನೆ. ಪಕ್ಷಾತೀತವಾಗಿ ಎಲ್ಲರನ್ನೂ ಕರೆದುಕೊಂಡು ಹೋಗ್ತೇನೆ ಎಂದು ತಿಳಿಸಿದರು.

ಕಳೆದ ಬಾರಿ ಪ್ರವಾಹ ವೇಳೆ ಸರ್ಕಾರ ಜಿಲ್ಲಾಡಳಿತ ಏನೇನು ತಪ್ಪು ಮಾಡಿತ್ತು ಅದನ್ನ ಸರಿಪಡಿಸುವೆ. ನೇಕಾರರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನಿಡಿದರು.

Comments

Leave a Reply

Your email address will not be published. Required fields are marked *