ಸಿಎಂ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡುವೆ: ಆನಂದ್ ಸಿಂಗ್

ಬಳ್ಳಾರಿ: ಖಾತೆ ವಿಚಾರಕ್ಕೆ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್ ಅವರು ಕೊಂಚ ಮಟ್ಟಿಗೆ ಶಾಂತವಾದಂತೆ ಕಾಣುತ್ತಿದೆ. ಖಾತೆ ಹಂಚಿಕೆ ಕುರಿತು ಕೇಂದ್ರದ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ನಾನು ಹೋಗುವುದಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದೇನೆ. ಅವರು ಏನು ನಿರ್ಧಾರ ಮಾಡುತ್ತಾರೆ ಎಂದು ಕಾದು ನೋಡುತ್ತೇನೆ ಎಂದಿದ್ದಾರೆ.

ಖಾತೆ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ಬಸವರಾಜ ಬೊಮ್ಮಾಯಿ ಭೇಟಿಗೆ ಬೆಂಗಳೂರಿಗೆ ತೆರಳಿದ್ದ ಆನಂದ್ ಸಿಂಗ್ ಅವರು ಇಂದು ಹೊಸಪೇಟೆಗೆ ಮರಳಿದ್ದಾರೆ. ಹೊಸಪೇಟೆಯ ಗೋಪಾಲಸ್ವಾಮಿ ದೇವಾಲಯಕ್ಕೆ ಬಂದು ಅಲ್ಲಿಯೇ ಕುಳಿತು ಊಟ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆನಂದ್ ಸಿಂಗ್, ನಾನು ದೆಹಲಿಗೆ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲು ತೆರಳುವೆ ಎಂದು ಎಲ್ಲಿಯೂ ಹೇಳಿಲ್ಲ, ಅಂತಹ ಪ್ರಸಂಗ ಬಂದಿಲ್ಲ. ಬೊಮ್ಮಾಯಿ ಅವರು ಎದುರಾದ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ ಕಾದುನೋಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆನಂದ್ ಸಿಂಗ್ ಪರ ಯತ್ನಾಳ್ ಬ್ಯಾಟಿಂಗ್

ಖಾತೆ ಹಂಚಿಕೆ ಬಗ್ಗೆ ಉಂಟಾದ ಅಸಮಾಧಾನ ಸೇರಿದಂತೆ ಇನ್ನಿತರೇ ಸಮಸ್ಯೆಗಳ ಬಗ್ಗೆ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೇನೆ. ಅವರು ಸರಿಪಡಿಸುವ ಭರವಸೆಯಿದ್ದು, ಕಾದು ನೋಡುತ್ತೇನೆ. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೆ ಆದರೆ ಸಚಿವ ಸ್ಥಾನದ ಅಸಮಧಾನದ ಕುರಿತು ಅವರೊಂದಿಗೆ ಚರ್ಚಿಸಿಲ್ಲ. ಅವರು ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಸಲಹೆ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

Comments

Leave a Reply

Your email address will not be published. Required fields are marked *