ಸಿಎಂ ಯಡಿಯೂರಪ್ಪ ಸಿಡಿ ಇತ್ತು, ಅದೇನಾಯ್ತು: ವಾಟಾಳ್ ನಾಗರಾಜ್ ಪ್ರಶ್ನೆ

ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿ.ಡಿ.ಯು ಇತ್ತು, ಅದೇನಾಯ್ತು? ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬಜೆಟ್ ನಲ್ಲಿ ಚಾಮರಾಜನಗರ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ಪ್ರತಿಭಟನೆ ನಡೆಸಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಶಾಸನ ಸಭೆಯಲ್ಲೇಕೆ ಚರ್ಚೆ ಆಗಲಿಲ್ಲ? ಸಿಎಂ ಯಡಿಯೂರಪ್ಪ ಶಾಸನ ಸಭೆಯನ್ನು ತಮ್ಮ ಸ್ವಂತ ಮನೆ ಮಾಡಿಕೊಂಡಿದ್ದಾರೆ. ಸ್ಪೀಕರ್ ಸಿಎಂ ಯಡಿಯೂರಪ್ಪ ಅವರ ರಬ್ಬರ್ ಸ್ಟಾಂಪ್ ಆಗಿದ್ದಾರೆ. ರಾಜ್ಯದಲ್ಲಿ ಸಮರ್ಥ ವಿರೋಧ ಪಕ್ಷ ಇಲ್ಲ. ಸಿದ್ದರಾಮಯ್ಯ ಪ್ರಬುದ್ಧ ರಾಜಕಾರಣಿ, ಆದರೂ ಸಿಡಿ ವಿಚಾರ ಚರ್ಚೆ ಮಾಡದೆ ಯಾಕೆ ಹಿಂದೇಟು ಹಾಕಿದರು ಎಂದು ಪ್ರಶ್ನಿಸಿದರು.

ಸಿಡಿ ವಿಚಾರ ಎಸ್.ಐ.ಟಿ ತನಿಖೆ ಬದಲು ಸಿಬಿಐ ಗೆ ಕೊಡಬೇಕಿತ್ತು. ಸಿಡಿ ಎಲ್ಲಿಂದ ಬಂತು, ಯಾರು ಮಾಡಿದರು, ಕಂಪ್ಲೇಂಟ್ ಕೊಟ್ಟು ಯಾಕೆ ಹಿಂಪಡೆದರು? ಈ ಎಲ್ಲ ವಿಚಾರಗಳ ಬಗ್ಗೆ ಶಾಸನ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಬೇಕಿತ್ತು. ಕೋರ್ಟ್ ಗೆ ಹೋಗಿರುವ 6 ಮಂತ್ರಿಗಳಿಗೆ ಸದನಕ್ಕೆ ಕಾಲಿಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ತಮಗೆ ಬೇಕಾದ ಜಿಲ್ಲೆಗಳಿಗೆ ಬಜೆಟ್ ನಲ್ಲಿ ಸಿಕ್ಕಾಪಟ್ಟೆ ಹಣ ನೀಡಿ ಚಾಮರಾಜನಗರ ಕಡೆಗಣಿಸುವ ಮೂಲಕ ಈ ಜಿಲ್ಲೆಯ ಜನರಿಗೆ ಅಪಮಾನ ಮಾಡಲಾಗಿದೆ ಎಂದು ವಾಟಾಳ್ ಆರೋಪಿಸಿದರು.

Comments

Leave a Reply

Your email address will not be published. Required fields are marked *