ಸಿಎಂ ಬಿಎಸ್‍ವೈ ಬದಲಾವಣೆ ವಿಚಾರ – ಒಂದು ವಾರ ಕಾಯಿರಿ: ಡಿಕೆಶಿ

ಬಾಗಲಕೋಟೆ: ಸಿಎಂ ಬಿ.ಎಸ್ ಯಡಿಯೂರಪ್ಪ ಬದಲಾವಣೆ ವಿಚಾರಕ್ಕೆ ಒಂದು ವಾರ ಕಾಯಿರಿ ಎಂದು ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಬನಹಟ್ಟಿಯಲ್ಲಿ ನೇಕಾರ ಸಮುದಾಯದೊಂದಿಗೆ ಸಂವಾದ ನಡೆಸಿ, ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಅವರ ಪಕ್ಷದ ಮೀಟಿಂಗ್ ಕರೆದಿದ್ದಾರಲ್ಲ. ಅಸೆಂಬ್ಲಿನೇ ಕರೆದಿಲ್ಲ, ಇದು ಉತ್ತರ ಕರ್ನಾಟಕದ ನಿರ್ಲಕ್ಷ್ಯ ಕಾಣುತ್ತಿದೆ. ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ಕರೆದಿಲ್ಲ. ಸುವರ್ಣ ಸೌಧದಲ್ಲಿ ಸೀಟು, ಚೇರ್ ಗಳನ್ನು ಹೆಗ್ಗಣಗಳು ತಿನ್ನುತ್ತಿವೆ. ಸುವರ್ಣಸೌಧದಲ್ಲಿ ಅಸೆಂಬ್ಲಿ ಕರೆಯುವುದು ಬಿಟ್ಟು ಮೀಟಿಂಗ್ ಮಾಡಿಕೊಂಡು ಕೂತಿದ್ದಾರೆ. ಇದು ಅವರ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಗೊತ್ತಾಗುತ್ತೆ. ಅಲ್ಲಿ ಅಧಿವೇಶನ ನಡೆಸದಿದ್ದರೆ ಅದನ್ನು ಬಾಡಿಗೆಯಾದರೂ ಕೊಡಲಿ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಲಾಗಿದೆ ಎಂದು ಗುಡುಗಿದ್ದಾರೆ.

ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಯಡಿಯೂರಪ್ಪ ಅವರನ್ನು ಇಳಿಸೋದು, ಏರಿಸೋದು ಕೂರಿಸೋದು ಅವರ ಪಾರ್ಟಿಗೆ ಬಿಟ್ಟಿದ್ದು. ಯಡಿಯೂರಪ್ಪ ವಿರುದ್ಧ ಶಾಸಕರು ಭ್ರಷ್ಟಾಚಾರದ ಬಗ್ಗೆ ಹೇಳುತ್ತಿದ್ದಾರೆ. ಆದರೆ ಶಾಸಕರು ಹೇಳುತ್ತಿರೋದು ಸರಿಯಲ್ಲ ಅಂತ ಹೈಕಮಾಂಡ್ ಹೇಳುತ್ತಿಲ್ಲ. ಹಾಗಿದ್ದರೆ ಅದು ನಿಜ ಇರಬೇಕಲ್ಲ. ಇಲ್ಲದಿದ್ರೆ ಶಾಸಕರು ಹೇಳೋದು ಸರಿ ಇಲ್ಲ ಅಂತ ಹೈಕಮಾಂಡ್ ಹೇಳಬಹುದಿತ್ತು, ಹೇಳುತ್ತಿಲ್ಲ. ಇದರ ಅರ್ಥ ಏನು ಅಂತ ಮಾಡಿಕೊಳ್ಳೋದು. ಬಿಎಸ್ ವೈ ಸಿಎಂ ಖುರ್ಚಿ ಉಳಿಯುತ್ತಾ ಎಂಬ ಪ್ರಶ್ನೆಗೆ, ನನ್ ಚೇರ್ ಏನೋ ಇದೆಯಪ್ಪಾ, ಬಿಗಿಯಾಗಿದೆ. ಕೆಳಗೆ ಕೂತ ಬೆಂಚ್ ತಟ್ಟಿ ತೋರಿಸಿ ಡಿಕೆಶಿ ವ್ಯಂಗ್ಯವಾಡಿದರು. ಇದನ್ನೂ ಓದಿ: ಬಾದಾಮಿ ಜನ ಒಳ್ಳೆಯವರು, ಚಾಮುಂಡೇಶ್ವರಿ ಜನ ಸೋಲಿಸಿಬಿಟ್ರು: ಸಿದ್ದರಾಮಯ್ಯ

ಬಿಎಸ್‍ವೈ ಭೋಜನಾ ಕೂಟ ಆಯೋಜನೆ ವಿಚಾರಕ್ಕೆ. ಅವರ ಪಕ್ಷದ ಬಗ್ಗೆ ನನಗೆ ಬೇಡಾ ಎಂದರು. ಸಿದ್ದು, ಡಿಕೆಶಿ ಹೈಕಮಾಂಡ್ ದೆಹಲಿಗೆ ಬುಲಾವ್ ವಿಚಾರಕ್ಕೆ ನಮ್ಮ ಪಾರ್ಟಿ ಮೀಟಿಂಗ್ ಇದೆ. ಎಲ್ಲ ರಾಜ್ಯದ ಅಧ್ಯಕ್ಷ, ಸಿಎಲ್‍ಪಿ ನಾಯಕರನ್ನು ಪಕ್ಷದ ಮುಂದಿನ ನಿರ್ಧಾರದ ಬಗ್ಗೆ ಚರ್ಚೆಗೆ ಕರೆದಿದ್ದಾರೆ. ನಾನು ಕಳೆದ ತಿಂಗಳು ದೆಹಲಿಗೆ ಹೋಗಿದ್ದೆ. ಕೆಲವು ಟೈಂ ಪಾರ್ಲಿಮೆಂಟ್ ನಡೆಯುತ್ತಿರುತ್ತದೆ. ನಮ್ಮ ಎಂಎಲ್‍ಎ, ಎಂಪಿಗಳು ಇರುತ್ತಾರೆ. ಹಾಗಾಗಿ ನಮ್ಮನ್ನು ಕರೆದು ಚರ್ಚೆ ಮಾಡ್ತಾರೆ. ಸುರ್ಜೆವಾಲ್ ಅವರು ನಮ್ಮ ರಾಜ್ಯದಲ್ಲಿ ಪರಾಭವಗೊಂಡ, ಪಕ್ಷದ ಪದಾಧಿಕಾರಿಗಳು ಭೇಟಿಯಾಗುವುದು ನಿಗದಿಯಾಗಿದೆ. ಮೊದಲು ಮಂಗಳೂರು, ಎರಡನೇಯದು ತುಮಕೂರು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ಎಲ್ಲಾ ವಿಭಾಗದಲ್ಲೂ ಭೇಟಿಯಾಗುತ್ತಾರೆ. ಸುರ್ಜೆವಾಲಾ ರಾಜ್ಯದ ಎಲ್ಲಾ ಡಿವಿಜನ್ ಗೆ ಭೇಟಿ ಕೊಡಲಿದ್ದಾರೆ. ಸಮಾವೇಶ, ಪಕ್ಷದ ಅಭ್ಯರ್ಥಿಗಳೊಂದಿಗೆ ಚರ್ಚೆ ಮಾಡಲಿದ್ದಾರೆ.ಪಕ್ಷದ ಸಂಘಟನೆಗಾಗಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.

ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಹೇಳಿಕೆಗಳ ವಿಚಾರಕ್ಕೆ ನನಗೆ ಗೊತ್ತಿಲ್ಲಪ್ಪ, ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಜಾರಿಕೊಂಡರು. ಮದುವೆಗೆ ಮುಂಚೆ ಕಾಂಗ್ರೆಸ್‍ನವರು ಮಕ್ಕಳು ಮಾಡೋಕೆ ಹೊರಟಿದ್ದಾರೆಂಬ ಕಾರಜೋಳ ವ್ಯಂಗ್ಯದ ಹೇಳಿಕೆಗೆ. ಹೌದಾ, ಅವ್ರಿಗೂ ಗೊತ್ತಾಗಿದಿಯಾ ಮಗು ಆಗುತ್ತೆ ಅಂತಾ? ಕಾರಜೋಳ ವ್ಯಂಗ್ಯ ಹೇಳಿಕೆಗೆ ಡಿಕೆಶಿ ವ್ಯಂಗ್ಯವಾಗಿಯೇ ಪ್ರತಿಕ್ರಿಯೆ ಕೊಟ್ಟರು. ಮಗು ಆಗುತ್ತೆ ಅಂತಾ ಅವ್ರಿಗೂ ಗೊತ್ತಾಗಿದೆ ತಾನೆ? ಅವ್ರಿಗೂ ಕಾಂಗ್ರೆಸ್ ಬರುತ್ತೆ ಅಂತಾ ಗೊತ್ತಾಗಿದೆ ತಾನೆ ಬಹಳ ಸಂತೋಷ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Comments

Leave a Reply

Your email address will not be published. Required fields are marked *