ಸಿಎಂ ಆಗಲು ರಾಜಕೀಯ ಗುರುವನ್ನು ತುಳಿದವರು ರಾಮನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರೆ: ಕಟೀಲ್

ಹಾಸನ: ಮುಖ್ಯಮಂತ್ರಿ ಆಗಲು ರಾಜಕೀಯ ಗುರುವನ್ನು ತುಳಿದ ಜನ, ದಿನವಿಡೀ ನಿಂಬೆಹಣ್ಣು ಹಿಡಿದುಕೊಳ್ಳುವವರು ರಾಮನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನ ಹೊರವಲಯದ ಹೆಚ್.ಕೆ.ಎಸ್ ಶಾಲೆಯಲ್ಲಿ ಆಯೋಜಿಸಿದ್ದ ರಾಜ್ಯ ಪ್ರಕೋಷ್ಠಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಅಹಿಂದ ಬಗ್ಗೆ ಹೇಳುವವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಣ ಕೇಳಿದರೆ ಕೆಟ್ಟದಾಗಿ ಮಾತನಾಡುತ್ತೀರಿ. ಮಸೀದಿಗೆ, ಚರ್ಚ್ ಗೆ ನೀವು ಹಣ ಹಾಕಿದಾಗ ನಾವು ಮಾತನಾಡಲಿಲ್ಲ. ಜಾತ್ಯಾತೀತದ ಬಗ್ಗೆ ಮಾತನಾಡುವ ನೀವು ಒಂದು ದೇವಾಲಯ ನಿರ್ಮಾಣ ಮಾಡಲಿಲ್ಲ. ಈಗ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಹಾಸನದವರು ಬಹಳ ಶ್ರೇಷ್ಠರು, ದಿನವಿಡೀ ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡು ಓಡಾಡುವವರು, ದೇವರ ಆರಾಧನೆ ಮಾಡುವಂತವರು, ದಿನ ನಿತ್ಯ ಜೋತಿಷ್ಯ ಕೇಳುವವರು, ವಿಧಾನಸಭೆಗೆ ಬರುವಾಗಲು ಜೋತಿಷ್ಯ ಕೇಳುವವರು ಈಗ ಗೂಂಡಾಗಳು ರಾಮಮಂದಿರ ನಿರ್ಮಾಣಕ್ಕೆ ಹಣ ಕೇಳಲು ನಮ್ಮ ಮನೆಗೆ ಬಂದಿದ್ದರು ಎಂದು ಹೇಳುತ್ತಾರೆ. ನನಗೆ ಸಂಶಯವಿದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗೂಂಡಾಗಳ ಬಳಿ ಹಣ ಪಡೆದು ಅವರ ಕೆಲಸ ಮಾಡಿಕೊಟ್ಟಿಲ್ಲ, ಅದಕ್ಕೆ ಅವರು ಹಣ ಕೇಳಲು ಬಂದಿದ್ದಾರೆ. ಆರ್.ಎಸ್.ಎಸ್. ಕಾರ್ಯಕರ್ತರು ಗೂಂಡಾಗಳಲ್ಲ ಅವರು ಆರ್‍ಎಸ್‍ಎಸ್‍ನ ಕಟ್ಟಾಳುಗಳು ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ಡ್ರಗ್ಸ್ ರಾಜ್ಯ ಆಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಡ್ರಗ್ಸ್ ಮುಕ್ತ ರಾಜ್ಯ ಮಾಡಿದ್ರು. ಕಾಂಗ್ರೆಸ್ಸಿನವರು ಗರೀಬಿ ಹಠಾವೋ ಹೆಸರಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಕಾಂಗ್ರೆಸ್ಸಿನ ರಾಷ್ಟಾಧ್ಯಕ್ಷರು, ಉಪಾಧ್ಯಕ್ಷರು, ರಾಜ್ಯ ಅಧ್ಯಕ್ಷರು ಜಾಮೀನಿನಲ್ಲಿದ್ದಾರೆ ಎಂದು ಟೀಕಿಸಿದರು.

Comments

Leave a Reply

Your email address will not be published. Required fields are marked *