ಸಾವು ಯಾವಾಗ ಬರುತ್ತೋ ಗೊತ್ತಿಲ್ಲ, ನಾನು ಧೃತಿಗೆಡದೇ ಹೋರಾಟ ಮಾಡುತ್ತೇನೆ: ಹೆಚ್‍ಡಿಡಿ

ಹಾಸನ: ಸಾವು ಯಾವಾಗ ಬರುತ್ತೋ ಯಾವಾಗ ಹೋಗುತ್ತೋ ಗೊತ್ತಿಲ್ಲ. ಆದರೆ ನಾನು ಧೃತಿಗೆಡದೇ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್‍ಡಿ.ದೇವೇಗೌಡರು ಹೇಳಿದ್ದಾರೆ.

ಇಂದು ಹಾಸನದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ಭೂಸುಧಾರಣಾ ಕಾಯ್ದೆ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಅಭಿವೃದ್ಧಿ ಕಾಯ್ದೆ ಸೇರಿದಂತೆ ರೈತರ ಹಿತಕ್ಕೆ ಧಕ್ಕೆ ತರುವ ತಿದ್ದುಪಡಿ ಹಿಂತೆಗೆದುಕೊಳ್ಳಲು ಆಗ್ರಹಿಸಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿತ್ತು.

ಪ್ರತಿಭಟನೆಯಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು, ಸಂಸದರು ಸೇರಿದಂತೆ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದೇವೇಗೌಡರು, ಈ ಪಕ್ಷ ಹುಟ್ಟಿರೋದೆ ರೈತರಿಗೋಸ್ಕರ. ಈ ವಯಸ್ಸಲ್ಲಿ ಕೊರೊನಾದಿಂದ ದೇವೇಗೌಡರಿಗೆ ಏನು ತೊಂದರೆಯಾಗುತ್ತೊ ಎಂದು ಎಲ್ಲರೂ ಹೇಳುತ್ತಾರೆ. ಆದರೆ ನಾನು ಯಾವುದಕ್ಕೂ ಧೃತಿಗೆಡಲ್ಲ. ಸಾವು ಯಾವಾಗ ಬರುತ್ತೋ, ಯಾವಾಗ ಹೋಗುತ್ತೋ ಯಾರಿಗೂ ಗೊತ್ತಿಲ್ಲ ಎಂದರು.

ಲೂಟಿಕೋರರಿಗೆ ಅನುಕೂಲವಾಗುತ್ತೆ ಎಂದು ರೈತ ವಿರೋಧಿ ಕಾಯ್ದೆ ತರಲು ಮುಂದಾಗಿದ್ದಾರೆ. ಇದು ನನಗೆ ಗೊತ್ತಿದೆ. ಇದು ವ್ಯಕ್ತಿ ದ್ವೇಷದ ಹೋರಾಟವಲ್ಲ. ನಮ್ಮ ರೈತರನ್ನು ಉಳಿಸುವುದಕ್ಕೆ ಹೋರಾಟ ಮಾಡುತ್ತಿದ್ದೇವೆ. ಇಂದು ನಮ್ಮ ರಾಜಕಾರಣಿಗಳಿಗೆ ಹಣ ಮಾಡುವ ಸ್ವಾರ್ಥ ಹೆಚ್ಚಿದೆ. ಇದರ ವಿರುದ್ಧ ಹೋರಾಟ ಮಾಡುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *