ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಶಾಕ್ – ಮುಷ್ಕರ ಮಾಡದಂತೆ ಆದೇಶ

ಬೆಂಗಳೂರು: ರಾಜ್ಯದಲ್ಲಿ ಅನ್‍ಲಾಕ್ ಆದ ನಂತರ ಬಸ್ ಸಂಚಾರ ಶುರುವಾಗಿದೆ. ಆದರು ಇನ್ನೂ ಮೊದಲ ರೀತಿಯಲ್ಲಿ ಎಲ್ಲಾ ಬಸ್‍ಗಳು ಸರಿಯಾಗಿ ರಸ್ತೆಗೆ ಇಳಿದಿಲ್ಲ. ಈ ಮಧ್ಯೆ ಸರ್ಕಾರಕ್ಕೆ ಶಾಕ್ ನೀಡಲು ಸಾರಿಗೆ ನೌಕರರು ಮುಂದಾಗಿದ್ದರು. ಆದರೆ ಇದೀಗ ಸಾರಿಗೆ ನೌಕರರಿಗೆ ಸರ್ಕಾರವೇ ಚಮಕ್ ನೀಡಿದೆ.

ಜುಲೈ 5ರ ಬಳಿಕ ಕುಟುಂಬ ಸಮೇತ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ತಯಾರು ನಡೆಸಿದ್ದರು. ಇದನ್ನು ಅರಿತ ಸರ್ಕಾರ ಈ ಹಿನ್ನೆಲೆ ಅಗತ್ಯ ಸೇವೆಗಳ ಮುಷ್ಕರವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 1 ರಿಂದ ಡಿ.31 ರವರೆಗೆ ಸಾರಿಗೆ ನೌಕರರ ಮುಷ್ಕರ ನಿಷೇಧ ಮಾಡಲಾಗಿದೆ. ಇದನ್ನೂ ಓದಿ: ಸಾರಿಗೆ ಸಮಸ್ಯೆಯಾದಾಗ ಜನರೇ ಸಹಿಸಿಕೊಳ್ಳಬೇಕು: ಸವದಿ ಉಡಾಫೆ ಹೇಳಿಕೆ

ಸದ್ಯ ಕೋವಿಡ್ ನಿಂದ ಆರ್ಥಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಂದರ್ಭದಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ. ಹಾಗಾಗಿ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆಯ 3ರ ಉಪವಿಭಾಗ 1ರ ಅನ್ವಯ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅಗತ್ಯ ಸೇವೆಗಳ ಮುಷ್ಕರ ನಿಷೇಧಿಸಿ ಆದೇಶವನ್ನು ಹೊರಡಿಸಿದೆ. ಇದರಿಂದ ಇದೀಗ ಸಾರಿಗೆ ನೌಕರರಿಗೆ ಹಿನ್ನಡೆ ಆದಂತಾಗಿದೆ.

Comments

Leave a Reply

Your email address will not be published. Required fields are marked *