ಸಾಮಾಜಿಕ ಅಂತರ ಇಲ್ಲದೆ ಹತ್ತಾರು ಕಾರ್ಯಕರ್ತರೊಂದಿಗೆ ಈಶ್ವರಪ್ಪ ರಾಯರ ದರ್ಶನ

– ಕೊರೊನಾ ಮುಕ್ತಿಗಾಗಿ ಮಂತ್ರಾಲಯದಲ್ಲಿ ರಾಯರ ವಿಶೇಷ ದರ್ಶನ
– ನೂರಾರು ಕಾರ್ಯಕರ್ತರ ಜೊತೆ ಕಾಮಗಾರಿ ಪರಿಶೀಲನೆ

ರಾಯಚೂರು: ಕೊರೊನಾ ತಾಂಡವಾಡುತ್ತಿರುವ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹತ್ತಾರು ಕಾರ್ಯಕರ್ತರೊಂದಿಗೆ ಮಂತ್ರಾಲಯದ ರಾಯರ ನವವೃಂದಾವನಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ನಿಯಮ ಪಾಲಿಸದೆ ಓಡಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಹೆಚ್ಚಿದೆ. ಹೀಗಾಗಿ ಪ್ರಾರ್ಥನೆ ಮಾಡಲು ಮಂತ್ರಾಲಯಕ್ಕೆ ಹೋಗಿದ್ದೆ. ದೇಶದಲ್ಲಿ ಮೋದಿ ಹೀರೋ ಆಗಿದ್ದಾರೆ ಆದರೂ, ಎಲ್ಲರನ್ನೂ ಕಾಪಾಡಬೇಕು ಎಂದು ರಾಯರ ದರ್ಶನ ಮಾಡಿದೆ ಎಂದು ರಾಯಚೂರಿನ ಎಲೆಬಿಚ್ಚಾಲಿಯಲ್ಲಿ ಹೇಳಿದ್ದಾರೆ.

ಸಾರ್ವಜನಿಕರಿಗೆ ದರ್ಶನಕ್ಕೆ ಅನುಮತಿ ಇಲ್ಲ ವಿಶೇಷ ಅನುಮತಿ ಪಡೆದು ರಾಯರ ದರ್ಶನ ಪಡೆದು ಸ್ವಾಮೀಜಿ ಭೇಟಿ ಮಾಡಿದ್ದೇನೆ. ನಾನು ರಾಯರ ಪರಮಭಕ್ತ ಸ್ವಾಮಿಜಿ ಅನುಮತಿ ಪಡೆದು ದರ್ಶನ ಮಾಡಿದ್ದೇನೆ ಎಂದು ಅಂತರಾಜ್ಯ ದೇವಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದುಕೊಂಡು ಬಂದಿರುವುದನ್ನ ಈಶ್ವರಪ್ಪ ಸಮರ್ಥಿಸಿಕೊಂಡರು. ಅಲ್ಲದೆ ಕಾರ್ಯಕರ್ತರೊಂದಿಗೆ ಎಲೆಬಿಚ್ಚಾಲಿಯ ರಾಯರ ನವವೃಂದಾವನದ ದರ್ಶನ ಪಡೆದರು. ಈ ವೇಳೆ ಸಹ ಸಾಮಾಜಿಕ ಅಂತರ ಮಾಯವಾಗಿತ್ತು.

ಅನಿವಾರ್ಯ ಕಾರಣಕ್ಕೆ ಒಟ್ಟಾಗಿರಬೇಕಾಗುತ್ತೆ ಯಾವಾಗಲೂ ಸಾಮಾಜಿಕ ಅಂತರ ಕಾಪಾಡುವುದು ಆಗುವುದಿಲ್ಲ. ಡಿನ್ನರ್ ರಾಜಕೀಯದ ಬಗ್ಗೆ ನನಗೇನೂ ಗೊತ್ತಿಲ್ಲ. ಎಲ್ಲರೂ ಒಂದೆಡೆ ಸೇರಬಾರದಾ, ಊಟಕ್ಕೆ ಸೇರಿದಾರೆ. ಅನಿವಾರ್ಯವಾಗಿ ಕೆಲವು ಆಗಲೇಬೇಕಿದೆ. ರಮೇಶ್ ಕತ್ತಿ, ದಿನೇಶ್ ಕತ್ತಿ ಏನು ಮಾಡಿದಾರೋ ಗೊತ್ತಿಲ್ಲ ಎಂದರು.

ಗ್ರಾಮ ಪಂಚಾಯಿತಿ ಅವಧಿ ಮುಗಿಯುತ್ತಿರುವ ಹಿನ್ನೆಲೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಆಡಳಿತಾಧಿಕಾರಿ ನೇಮಕ ಮಾಡಬೇಕಾ, ಸಮಿತಿ ಮಾಡಬೇಕೋ ತೀರ್ಮಾನ ಮಾಡಬೇಕಿದೆ. ಚುನಾವಣಾ ಆಯೋಗಕ್ಕೆ ಚುನಾವಣೆ ನಡೆಸಲು ನಾವು ಹೇಳಿದ್ದೇವೆ ಆದರೆ, ಕೊರೊನಾ ಕಾರಣಕ್ಕೆ ಆಯೋಗ ಚುನಾವಣೆ ಬೇಡ ಎಂದಿದೆ. ಕಾಂಗ್ರೆಸ್ ಮಾಡುತ್ತಿರುವ ಯಾವುದೇ ಆರೋಪಗಳಿಗೆ ಹುರುಳಿಲ್ಲ ಎಂದರು.

ನರೇಗಾ ಮೂಲಕ ಗ್ರಾಮೀಣ ಭಾಗದ ಬಡವರಿಗೆ ಉದ್ಯೋಗ ಸೃಷ್ಠಿ ಮಾಡಿದ್ದೇವೆ. 5,800ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಕೊಟ್ಟಿದ್ದೇವೆ. ಹಿಂದಿನ ಬಾಕಿ ಹಣವನ್ನು ಬಿಡುಗಡೆ ಮಾಡಿ ತೀರಿಸುತ್ತಿದ್ದೇವೆ. ಯಾರೇ ಬಂದರೂ ಜಾಬ್ ಕಾರ್ಡ್ ಮಾಡಿ ಕೆಲಸ ಕೊಡುತ್ತಿದ್ದೇವೆ. ಕೇಂದ್ರದ 20 ಲಕ್ಷ ಕೋಟಿ ರೂ.ಗಳಲ್ಲಿ 40 ಸಾವಿರ ಕೋಟಿ ರೂ. ಹಣವನ್ನ ಬಡವರಿಗೆ ಉದ್ಯೋಗ ಕೊಡಲು ಮೀಸಲಿಟ್ಟಿದ್ದೇವೆ ಎಂದರು. ರಾಯಚೂರು ತಾಲೂಕಿನ ವಿವಿಧೆಡೆ ನರೇಗಾ ಕಾಮಗಾರಿ ವೀಕ್ಷಣೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವ ಈಶ್ವರಪ್ಪ ಭಾಗವಹಿಸಿ ಯಾದಗಿರಿಗೆ ತೆರಳಲಿದ್ದಾರೆ.

Comments

Leave a Reply

Your email address will not be published. Required fields are marked *