ಸಹೋದರನ ದುಶ್ಚಟಗಳಿಂದ ಬೇಸತ್ತು ಅಣ್ಣ ನೇಣಿಗೆ ಶರಣು..?

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿ ಕಛೇರಿಯಲ್ಲಿ ಆಟೋ ಚಾಲಕನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ.

ಶಿಡ್ಲಘಟ್ಟ ನಗರದ ಎಡಿ ಕಾಲೋನಿ ನಿವಾಸಿ ಲಕ್ಮೀಪತಿ(25) ಮೃತ ದುರ್ದೈವಿ. ಕುಡಿತ ಸೇರಿದಂತೆ ಹಲವು ದುಶ್ಚಟಗಳಿಗೆ ದಾಸನಾಗಿದ್ದ ತನ್ನ ತಮ್ಮ ನಾಗರಾಜ್ ಗೆ ಬುದ್ಧಿ ಹೇಳಿ ದಂಡಿಸಿದ್ದನಂತೆ. ಆದರೆ ಸಹೋದರ ಮಾತ್ರ ದುಶ್ಚಟಗಳಿಂದ ದೂರವಾಗಿಲ್ಲ. ತಮ್ಮನ ವರ್ತನೆಯಿಂದ ಬೇಸತ್ತ ಅಣ್ಣ ಲಕ್ಮೀಪತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ನಿನ್ನೆ ತಡರಾತ್ರಿ ನಗರದ ರೇಷ್ಮೆ ಬಿತ್ತನೆ ಕೋಠಿ ಕಛೇರಿ ಬಳಿ ಆಟೋ ಸಮೇತ ಬಂದು ಅಟೋದಲ್ಲೇ ಮಲಗಿದ್ದ. ಕೊನೆಗೆ ಚಳಿ ತಾಳಲಾರದೆ ಮಲಗಲು ಜಾಗ ಕೊಡಿ ಅಂತ ಅಲ್ಲಿನ ರೇಷ್ಮೆ ಬಿತ್ತನೆ ಕೋಠಿ ಕಚೇರಿಯ ಸಿಬ್ಬಂದಿಗೆ ಮನವಿ ಮಾಡಿ ಒಳಗೆ ಹೋಗಿ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರತ್ಯಕ್ಷದರ್ಶಿ ಮುರಳಿ ತಿಳಿಸಿದ್ದಾರೆ.

ಇನ್ನೂ ವಿಷಯ ತಿಳಿಯುತ್ತಿದ್ದಂತೆ ಶಿಡ್ಲಘಟ್ಟ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

Comments

Leave a Reply

Your email address will not be published. Required fields are marked *