ಸರ್ಕಾರಿ ಮುದ್ರೆ ಬಳಸಿ ಬೃಹತ್ ವಂಚನೆ – ಬೆಂಗಳೂರಲ್ಲಿ ಸಿಕ್ಕಿಬಿತ್ತು ನಕಲಿ ಗ್ಯಾಂಗ್

ಬೆಂಗಳೂರು: ಸರ್ಕಾರದ ಮುದ್ರೆಯನ್ನು ಬಳಸಿಕೊಂಡು ನಕಲಿ ಐಡಿ ಕಾರ್ಡ್‍ಗಳನ್ನು ಮಾಡಿ ಜನಸಾಮಾನ್ಯರಿಗೆ ಟೋಪಿ ಹಾಕುತ್ತಿದ್ದ 10 ಜನರ ಗ್ಯಾಂಗ್ ಸದಸ್ಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕನಕಪುರ ರೋಡ್‍ನಲ್ಲಿರುವ ಹೆರಿಟೇಜ್ ಅಪಾರ್ಟ್‍ಮೆಂಟ್‍ನಲ್ಲಿ ನಕಲಿ ಐಡಿ ಜಾಲ ನಡೆಯುತ್ತಿತ್ತು. ಇದರ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಖಾಸಗಿ ಕಂಪನಿಯ ಉದ್ಯೋಗಿಗಳು ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ. ಈ ಕತರ್‍ನಾಕ್ ಗ್ಯಾಂಗ್ ಸರ್ಕಾರದ ಐಡಿ ಕಾರ್ಡ್‍ಗಳಂತೆ ಕಾಣುವ ವೋಟರ್ ಐಡಿ, ಪ್ಯಾನ್ ಕಾರ್ಡ್, ಆರ್‍ಸಿ ಬುಕ್ ಹಾಗೂ ಇನ್ನಿತರ ಪ್ರಮುಖ ದಾಖಲೆಗಳನ್ನು ನಕಲಿಯಾಗಿ ಮುದ್ರಿಸಿಕೊಟ್ಟು ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡುತ್ತಿತ್ತು.

ಈ ನಕಲಿ ಐಡಿ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಹೆಸರು ವಿಳಾಸವಿಲ್ಲದ 28 ಸಾವಿರ ವೋಟರ್ ಐಡಿ, 9 ಸಾವಿರ ಆಧಾರ್ ಕಾರ್ಡ್, 9 ಸಾವಿರ ಪ್ಯಾನ್ ಕಾರ್ಡ್‍ಗಳು 12,200 ಆರ್ ಸಿ ಕಾರ್ಡ್‍ಗಳು, 6,240 ಹೆಸರು ವಿಳಾಸವಿರುವ ನಕಲಿ ಎಲೆಕ್ಷನ್ ಐಡಿ ಪತ್ತೆಯಾಗಿದೆ. ಐಡಿ ಕಾರ್ಡ್ ಜಾಲದ ಪ್ರಮುಖ ಆರೋಪಿ ರಾಜಸ್ಥಾನದ ಕಮಲೇಶ್ ಮತ್ತು ತಂಡವನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ರೋಸ್ ಮಾರ್ಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಿಬ್ಬಂದಿ ನಕಲಿ ದಂಧೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಆರ್‍ಟಿಒ ಕಚೇರಿಯ ಕಾರ್ಡ್‍ಗಳನ್ನ ಪ್ರಿಂಟಿಂಗ್ ಮಾಡಲು ರೋಸ್ ಮಾರ್ಟ್ ಕಂಪನಿ ಗುತ್ತಿಗೆ ಪಡೆದಿತ್ತು. ಇದನ್ನೇ ಲಾಭವನ್ನಾಗಿಸಿದ ಕಂಪನಿಯ ಇಬ್ಬರು ಮಾಜಿ ಮತ್ತು ಕೆಲ ಹಾಲಿ ನೌಕರರಿಂದ ಸರ್ಕಾರಕ್ಕೆ ವಂಚನೆಮಾಡಿರುವುದು ಬೆಳಕಿಗೆ ಬಂದಿದೆ.

ಬಂಧಿತರನ್ನು ಕಮಲೇಶ್, ಲೋಕೇಶ್, ಸುದರ್ಶನ್, ದರ್ಶನ್, ಶ್ರೀಧರ್, ಚಂದ್ರಪ್ಪ, ಅಭಿನಾಶ್, ತೇಜಸ್ ಹಾಗೂ ಶ್ರೀಧರ್ ದೇಶಪಾಂಡೆ ಎಂದು ಗುರುತಿಸಲಾಗಿದೆ. ಶ್ರೀಧರ್ ಖಾಸಗಿ ಚಾನೆಲ್‍ನ ನೌಕರನಾಗಿದ್ದು, ಶ್ರೀಧರ್, ಲೋಕೇಶ್, ರೋಸ್ ಮಾರ್ಟ್ ಕಂಪನಿಯ ನೌಕರಾಗಿದ್ದಾರೆ. ಇನ್ನೂ ಈ ಜಾಲದ ಹಿಂದೆ ಇನ್ನೆಷ್ಟೂ ಕಾಣದ ಕೈಗಳಿವೆ ಎಂದು ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.

</p>

Comments

Leave a Reply

Your email address will not be published. Required fields are marked *