ಸಭೆಯಲ್ಲಿ ಕುಸಿದು ಬಿದ್ದ ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ

ತುಮಕೂರು: ಶಿರಾ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ಸಭೆಯಲ್ಲಿ ಕುಸಿದು ಬಿದ್ದಿದ್ದು, ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇಂದು ಉಪಚುನಾವಣೆ ಪ್ರಚಾರದ ಅಂಗವಾಗಿ ಜೆಡಿಎಸ್ ದೊಡ್ಡ ಮಟ್ಟದ ಸಮಾರಂಭವನ್ನು ಮಾಡುತ್ತಿದೆ. ಪ್ರಚಾರ ರ್ಯಾಲಿ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮ್ಮಾಜಮ್ಮ ಅವರು ಕಾರ್ಯಕ್ರಮದ ಮಧ್ಯದಲ್ಲೇ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣ ಅಲ್ಲಿಂದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅಮ್ಮಾಜಮ್ಮ ಅವರು ಶಿರಾ ಕ್ಷೇತ್ರದ ಶಾಸಕರಾಗಿದ್ದ ದಿವಂಗತ ಸತ್ಯನಾರಾಯಣ್ ಅವರ ಪತ್ನಿಯಾಗಿದ್ದಾರೆ. ಸತ್ಯನಾರಾಯಣ್ ಅವರು ನಿಧನದಿಂದ ತೆರವಾದ ಶಾಸಕ ಸ್ಥಾನಕ್ಕೆ ಇಂದು ಉಪಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಅಮ್ಮಾಜಮ್ಮಗೆ ಟಿಕೆಟ್ ನೀಡಿದೆ. ಈ ಹಿಂದೆ ಟಿಕೆಟ್ ಘೋಷಣೆಯಾದ ದಿನವೇ ಅಮ್ಮಾಜಮ್ಮ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಚಿಕಿತ್ಸೆ ಪಡೆದು ಗುಣಮಖರಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಇಂದು ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪುರ್, ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಜೊತೆಗೆ ಐಬಿ ಸರ್ಕಲ್‍ನಿಂದ ರಾಮಚಂದ್ರಪ್ಪ ಬಯಲು ಮಂದಿರದವರೆಗೆ ಬೃಹತ್ ರ‍್ಯಾಲಿ ಕೂಡ ಮಾಡಲಾಯ್ತು.

Comments

Leave a Reply

Your email address will not be published. Required fields are marked *