ಸದನದಲ್ಲಿ ಇಂದು ಸದ್ದು ಮಾಡುತ್ತಾ ಸಿ.ಡಿ ಪ್ರಕರಣ..? – ನಿಲುವಳಿ ಮಂಡಿಸಲು ಕಾಂಗ್ರೆಸ್ ಸಿದ್ಧತೆ

ಬೆಂಗಳೂರು: ವಿಧಾನಸಭೆಯಲ್ಲಿಂದು ಸಿ.ಡಿ ಪ್ರಕರಣ ಸದ್ದು ಮಾಡುವ ಸಾಧ್ಯತೆ ಇದೆ. ಸಿ.ಡಿ ವಿಚಾರವಾಗಿ ಚರ್ಚೆ ನಡೆಸುವ ನಿಟ್ಟಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ನಿಲುವಳಿ ಸೂಚನೆ ಮಂಡಿಸಲಿದ್ದಾರೆ.

ಸಿ.ಡಿ ಪ್ರಕರಣ ಹಾಗೂ ಆರು ಸಚಿವರ ಕೋರ್ಟ್ ತಡೆ ಸಂಬಂಧ ನಿಯಮ 60 ಅಡಿಯಲ್ಲಿ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿ ಚರ್ಚೆಗೆ ಒತ್ತಾಯಿಸಲಿದ್ದಾರೆ. ಈ ಸಂಬಂಧ ಈಗಾಗಲೇ ವಿಧಾನಸಭೆಯ ಕಾರ್ಯದರ್ಶಿಗೆ ಸೂಚನಾ ಪತ್ರವನ್ನು ಸಿದ್ದರಾಮಯ್ಯ ನೀಡಿದ್ದಾರೆ. ಎಸ್‍ಐಟಿ ತನಿಖೆ ಪಾರದರ್ಶಕವಾಗಿಲ್ಲ. ಸಂತ್ರಸ್ತೆ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಿಳೆ ಸಾಮಾಜಿಕ ಜಾಲತಾಣದ ಮೂಲಕ ಮಾಡಿದ ಮನವಿಯನ್ನ ಆಧರಿಸಿ ಎಫ್‍ಐಆರ್ ದಾಖಲಾಗಿಲ್ಲ ಎಂದು ಸೂಚನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆರು ಸಚಿವರ ಕೋರ್ಟ್ ವಿಚಾರ ರಾಜ್ಯದ ಮಾನಮರ್ಯಾದೆ ಹರಾಜು ಹಾಕಿದೆ ಎಂದು ನಿಲುವಳಿ ಸೂಚನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರ ಚರ್ಚೆಗೆ ಬಂದರೆ ಸದನದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗೋದು ಫಿಕ್ಸ್. ನಿಲುವಳಿ ಸೂಚನೆ ಮೂಲಕ ಸುದೀರ್ಘ ಚರ್ಚೆಯನ್ನು ನಡೆಸಿ ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡೋದು ಕಾಂಗ್ರೆಸ್ ಪ್ಲಾನ್ ಆಗಿದೆ.

Comments

Leave a Reply

Your email address will not be published. Required fields are marked *