ಸತ್ಯಕ್ಕೆ ಜಯ, ಸತ್ಯಮೇವ ಜಯತೇ: ರಾಗಿಣಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಬಂಧಿತರಾಗಿದ್ದ ನಟಿ ರಾಗಿಣಿ 144 ದಿನಗಳ ಬಳಿಕ ಪರಪ್ಪನ ಅಗ್ರಹಾರದಿಂದ ಹೊರಬರುತ್ತಿದ್ದಂತೆ ನಿಜವಾಗಿ ಸತ್ಯಕ್ಕೆ ಜಯವಾಗಿದೆ, ಸತ್ಯಮೇವ ಜಯತೇ ಎಂದಿದ್ದಾರೆ.

 

ಜೈಲಿನಿಂದ ಹೊರಬಂದು ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, ಇಷ್ಟು ದಿನ ನನ್ನ ಪರ ನಿಂತಿದ್ದ ಬಂಧುಗಳಿಗೆ, ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ. ನಾನು ನ್ಯಾಯಾಲಯದ ಮೇಲೆ ತುಂಬಾ ನಂಬಿಕೆ ಇಟ್ಟಿದ್ದೆ. ಹಾಗಾಗಿ ನನಗೆ ಸಿಕ್ಕ ಜಯವಿದು. ನಾನು ತುಂಬಾ ಹೋರಾಟಗಳನ್ನು ನಡೆಸಿ ಜೈಲಿನಿಂದ ಹೊರಗಡೆ ಬಂದಿದ್ದೇನೆ. ಈ ಸಮಯದಲ್ಲಿ ನನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಇದು ಸತ್ಯಕ್ಕೆ ಸಿಕ್ಕ ಜಯ ಎಂದು ಇಡೀ ಕರ್ನಾಟಕದ ಜನತೆಯ ಮುಂದೆ ಹೇಳುತ್ತಿದ್ದೇನೆ. ಸತ್ಯವನ್ನು ಯಾರೂ ಕೂಡ ಮುಚ್ಚಿಡಲು ಸಾಧ್ಯವಿಲ್ಲ ಎಂದು ಸಾಬೀತಾಗಿದೆ. ಇನ್ನೂ ಕೆಲದಿನಗಳ ನಂತರ ಮಾಧ್ಯಮಗಳೊಂದಿಗೆ ಹಲವು ವಿಷಯಗಳನ್ನು ಹಂಚಿಕೊಳ್ಳಲು ಇದೆ ಎಂದು ತಿಳಿಸಿದರು.

 

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ಸೆಪ್ಟೆಂಬರ್ 4 ರಂದು ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ 144 ದಿನದ ಬಳಿಕ ರಾಗಿಣಿಗೆ ಸುಪ್ರೀಂಕೋರ್ಟ್‍ನ ನ್ಯಾ. ರೊಹಿಂಗ್ಟನ್ ನಾರಿಮನ್ ನೇತೃತ್ವದ ತ್ರೀ ಸದಸ್ಯ ಪೀಠ ಗುರುವಾರ ಜಾಮೀನು ಮಂಜೂರು ಮಾಡಿತ್ತು. ಕೋವಿಡ್ 19, ವಾರದ ರಜೆ ಹಿನ್ನೆಲೆಯಲ್ಲಿ ಜಾಮೀನು ಪ್ರಕ್ರಿಯೆ ತಡವಾದ ಕಾರಣ ನಾಲ್ಕು ದಿನದ ಬಳಿಕ ಇಂದು ಪರಪ್ಪನ ಅಗ್ರಹಾರದಿಂದ ರಾಗಿಣಿ ಹೊರಬಂದಿದ್ದಾರೆ.

Comments

Leave a Reply

Your email address will not be published. Required fields are marked *