ಗದಗ: ಸಚಿವ ಸಂಪುಟ ರಚನೆ, ಪುನಾರಚನೆ, ವಿಸ್ತರಣೆ ಎಲ್ಲವು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಸಚಿವ ಸಿ.ಸಿ ಪಾಟೀಲ್ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಫಕ್ಕಿರಸಾ ಬಾಂಡಗೆ ಹಾಗೂ ಸ್ನೇಹಿತರು ತಯಾರಿಸಿದ್ದ ದಿನಸಿ ಕಿಟ್ ಗಳನ್ನು ಸಚಿವ ಸಿ.ಸಿ ಪಾಟೀಲ್ ನೇತೃತ್ವದಲ್ಲಿ ಹಂಚಿಕೆ ಮಾಡಲಾಯಿತು. ನಗರದ ಖಾಸಗಿ ಹೊಟೇಲ್ ಆವರಣದಲ್ಲಿ ಸಾವಿರಾರು ಕಿಟ್ ಗಳನ್ನು ಹಂಚಿಕೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಏನು, ಹೇಗೆ ನಿರ್ಧಾರ ಮಾಡುತ್ತಾರೆ ಎಂದು ನಾನು ಹೇಗೆ ಹೇಳಲಿ?. ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರಥಮ ಆಧ್ಯತೆ ಕೊರೋನಾ ನಿಯಂತ್ರಣ ಮಾತ್ರ. ಸಂಪುಟ ವಿಚಾರವಾಗಿ ನನ್ನ ಸಲಹೆ ಕೇಳಿದರೆ, ನಾನು ಪಕ್ಷದ ಚೌಕಟ್ಟಿನಲ್ಲಿ ಹೇಳುತ್ತೇನೆ. ಪಕ್ಷದ ವಿಚಾರವನ್ನ ಮಾಧ್ಯಮದ ಎದುರು ಹಂಚಿಕೊಂಡು ಶಿಸ್ತು ಮೀರುವುದಿಲ್ಲ ಎಂದರು.

ರಾಜ್ಯದಲ್ಲಿ ಪರೀಕ್ಷೆ ರದ್ದತಿ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಕುರಿತು ಪ್ರತಿಕ್ರಿಯಿಸಿದರು. ರಾಜ್ಯದ ಮಕ್ಕಳ ಹಿತ ದೃಷ್ಟಿಯಿಂದ ಏನು ನಿರ್ಣಯ ತೆಗೆದುಕೊಳ್ಳಬೇಕು ಅನ್ನೋ ನನ್ನ ವಿಚಾರವನ್ನ ಸಂಪುಟದಲ್ಲಿ ಹೇಳ್ತೀನಿ. ಬೇರೆಯವರ ಖಾತೆಯಲ್ಲಿ ಹಸ್ತಕ್ಷೇಪ ಮಾಡುವುದು ತಪ್ಪು. ಸಚಿವ ಸಂಪುಟದಲ್ಲಿ ಪ್ರಸ್ತಾಪವಾದಾಗ ನನ್ನ ಅಭಿಪ್ರಾಯ ತಿಳಿಸುವೆ ಎಂದರು.

ಈ ವಿಷಯದಲ್ಲೂ ಶಿಕ್ಷಣ ಸಚಿವರು, ಸಿ.ಎಮ್ ಹಾಗೂ ಅಧಿಕಾರಿಗಳು, ತಜ್ಞರ ಮಾಹಿತಿ ಸಂಗ್ರಹಿಸುತ್ತಾರೆ. ಎಲ್ಲಾ ವಿಚಾರಗಳನ್ನು ಸಿ.ಎಮ್ ನಿಭಾಯಿಸುತ್ತಾರೆ ಎಂದರು. ಈ ಕಾರ್ಯಕ್ರಮದಲ್ಲಿ ಎಮ್.ಎಲ್.ಸಿ, ಎಸ್.ವಿ ಸಂಕನೂರ, ಉದ್ಯಮಿ ಫಕ್ಕೀರಸಾ ಬಾಂಡಗೆ ಸೇರಿದಂತೆ ಅನೇಕ ಜನ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply