ಸಚಿವರ ಕಾರ್ ಓವರ್ ಟೇಕ್ – 5 ಗಂಟೆ ಠಾಣೆಯಲ್ಲಿ ಕುಳಿತ ಚಾಲಕರು

– ಚಾಲಕರಿಬ್ಬರಿಗೂ ಪೊಲೀಸರಿಂದ ದಂಡ

ಭುವನೇಶ್ವರ: ಓಡಿಶಾದ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಎಂಎಸ್‍ಎಂಇ ರಾಜ್ಯ ಮಂತ್ರಿ ಪ್ರತಾಪ್ ಚಂದ್ರ ಸಾರಂಗಿ ಅವರ ಕಾರ್ ಓವರ್ ಟೇಕ್ ಮಾಡಿ ಚಾಲಕರಿಗೆ ದಂಡ ಹಾಕಲಾಗಿದೆ.

ಸಚಿವ ಸಾರಂಗಿ ಅವರ ಪ್ರಯಾಣಿಸುತ್ತಿದ್ದ ಮಾರ್ಗದಲ್ಲಿ ಎರಡು ಕಾರ್ ಗಳು ಓವರ್ ಟೇಕ್ ಮಾಡಿದ್ದವು. ತದನಂತರ ಎಸ್ಕಾರ್ಟ್ ಎರಡು ಕಾರ್ ಗಳನ್ನ ಸುಮಾರು 20 ಕಿಲೋ ಮೀಟರ್ ಹಿಂಬಾಲಿಸಿ ತಡೆದಿದ್ದಾರೆ. ನಂತರ ಕಾರ್ ಚಾಲಕರಿಬ್ಬರನ್ನ ಐದು ಗಂಟೆ ಠಾಣೆಯಲ್ಲಿ ರಿಸಿ ದಂಡ ವಿಧಿಸಿ ಕಳುಹಿಸಲಾಗಿದೆ.

ಕೋಲ್ಕತ್ತಾ ಮೂಲದ ಸಂತೋಷ್ ತಮ್ಮ ಸೋದರ, ಪತ್ನಿ ಹಾಗೂ ಮಕ್ಕಳೊಂದಿಗೆ ಬಾಲಸೋರ್ ಜಿಲ್ಲೆಯ ಪಂಚಲಿಂಗೇಶ್ವರ ಕ್ಷೇತ್ರಕ್ಕೆ ಎರಡು ಕಾರ್ ಗಳಲ್ಲಿ ತೆರಳುತ್ತಿದ್ದರು. ಸಂತೋಷ್ ಅವರ ಕಾರುಗಳು ಹೆದ್ದಾರಿ ಪ್ರವೇಶಿಸುತ್ತಿದ್ದಂತೆ ಎಸ್ಕಾರ್ಟ್ ಸಿಬ್ಬಂದಿ ಹಾರ್ನ್ ಹಾಕಿದ್ದಾರೆ. ಹಾರ್ನ್ ಕೇಳದ ಹಿನ್ನೆಲೆ ಸಂತೋಷ್ ಓವರ್‍ಟೇಕ್ ಮಾಡಿ ಮುಂದೆ ಸಾಗಿದ್ದಾರೆ.

ಹಿಂದಿನಿಂದ ಸೈರನ್ ಕೇಳಿದಾಗ ಅಂಬುಲೆನ್ಸ್ ಅಂತ ಸೈಡ್ ನೀಡಿದೆ. ಆದ್ರೆ ಅದು ಸಚಿವರ ಎಸ್ಕಾರ್ಟ್ ಸಿಬ್ಬಂದಿ ವಾಹನವಾಗಿತ್ತು. ಸಚಿವರ ಕಾರ್ ಓವರ್ ಟೇಕ್ ಮಾಡೋದು ತಪ್ಪು ಎಂದು ನಮಗೆ ತಿಳಿದಿರಲಿಲ್ಲ. ಐದು ಗಂಟೆ ನಮ್ಮನ್ನ ಠಾಣೆಯಲ್ಲಿರಿಸಿ ಸಮಯ ವ್ಯರ್ಥ ಮಾಡಲಾಯ್ತು. ಪೊಲೀಸರು ಪಿಆರ್ ಬಾಂಡ್ ನಲ್ಲಿ ನಮ್ಮ ಸಹಿ ತೆಗೆದು ದಂಡ ತೆಗದುಕೊಂಡಿದ್ದಾರೆ ಎಂದು ಸಂತೋಷ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವ ಪ್ರತಾಪ್ ಚಂದ್ರ ಸಾರಂಗಿ ಸಮೀಕ್ಷೆ ಸಭೆ ಹಿನ್ನೆಲೆ ಬಾಲಸೋರ್ ಜಿಲ್ಲೆಯ ಬಾಸ್ತಾಗೆ ಆಗಮಿಸಿದ್ದರು. ಸಚಿವರ ಎಸ್ಕಾರ್ಟ್ ಸಿಬ್ಬಂದಿ ಇಬ್ಬರು ಚಾಲಕರನ್ನ ಕಾರ್ ಸಹಿತ ಠಾಣೆಗೆ ಕರೆ ತಂದಿದ್ದರು. ನಿಯಮದಂತೆ ಇಬ್ಬರಿಗೂ ದಂಡ ಹಾಕಲಾಗಿದೆ ಎಂದು ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಅಶೋಕ್ ನಾಯಕ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *