ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದೇ ಮೈಸೂರಿನಲ್ಲಿ ಕಾನ್ಸ್‌ಟೇಬಲ್ ಸಾವು

ಮೈಸೂರು: ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದೇ ಪೊಲೀಸ್ ಪೇದೆ ಸಾವನ್ನಪ್ಪಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.

ಮೂಲತಃ ಗುಂಡ್ಲುಪೇಟೆ ತಾಲೂಕು ಸೋಮನಹಳ್ಳಿಯವರಾಗಿದ್ದ ಕಾನ್ಸ್‌ಟೇಬಲ್ ಸಾವನ್ನಪ್ಪಿದ್ದು, ಕೊರೊನಾ ಪಾಸಿಟಿವ್ ಬಂದ ಕಾರಣದಿಂದ ಮನೆಯಲ್ಲೇ ಹೋಂ ಐಸೋಲೇಷನ್‍ನಲ್ಲಿದ್ದರು. ಕಳೆದ ಮೂರು ದಿನಗಳಿಂದ ಐಸೋಲೇಷನ್‍ನಲ್ಲಿದ್ದ ಅವರಿಗೆ ರಾತ್ರಿ 7 ಗಂಟೆ ಸುಮಾರಿಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಕರೆ ಮಾಡಿದ್ದರೂ ಆಂಬ್ಯುಲೆನ್ಸ್ ತಡವಾಗಿ ಆಗಮಿಸಿತ್ತು.

ಆಂಬ್ಯುಲೆನ್ಸ್ ಸಿಕ್ಕ ತಕ್ಷಣ ಇದ್ದ ಒಬ್ಬ ಸಿಬ್ಬಂದಿಯೊಂದಿಗೆ ಪೇದೆಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಅವರು ಅದಾಗಲೇ ತೀವ್ರ ಅಸ್ವಸ್ಥರಾಗಿದ್ದರು ಎಂಬ ಮಾಹಿತಿ ಲಭಿಸಿದೆ. ಇತ್ತ ಪೇದೆಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದರೂ ಆಸ್ಪತ್ರೆ ಸಿಬ್ಬಂದಿ ಕೂಡ ರೋಗಿಯನ್ನು ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ವಹಿಸಿದ್ದರು. ಆಸ್ಪತ್ರೆ ಬಂದ ಕೂಡಲೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಗೆ ಕನಿಷ್ಠ ಪ್ರಮಾಣ ಮಾನವೀಯತೆಯನ್ನು ತೋರದ ಆಸ್ಪತ್ರೆಗೆ ಸಿಬ್ಬಂದಿ ಚಿಕಿತ್ಸೆ ನೀಡಲು ಮುಂದಾಗಿರಲಿಲ್ಲ. ಪರಿಣಾಮ ಪೇದೆ ಸಾವನ್ನಪ್ಪಿದ್ದಾರೆ.

ಸರ್ಕಾರ ಪ್ರತಿ ಬಾರಿ ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ವ್ಯವಸ್ಥೆಯನ್ನು ಸರಿಪಡಿಸುವ ಮಾತನ್ನು ಹೇಳುತ್ತದೆ. ಕಳೆದ ಒಂದು ವರ್ಷದಿಂದ ನಂಜಗೂಡು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಕರೆ ಮಾಡಿದ ಸಂದರ್ಭದಲ್ಲಿ ಬಂದಿದ್ದ ಆಂಬ್ಯುಲೆನ್ಸ್ ನಲ್ಲಿ ಕೇವಲ ಒಬ್ಬರೇ ಸಿಬ್ಬಂದಿ ಇದ್ದರು. ಅವರೇ ಆಂಬ್ಯುಲೆನ್ಸ್ ಚಾಲನೆ ಮಾಡುತ್ತಿದ್ದರು. ರೋಗಿಯನ್ನು ಆಂಬ್ಯುಲೆನ್ಸ್ ಶಿಫ್ಟ್ ಮಾಡಲು ಸಹ ಸಿಬ್ಬಂದಿ ಪರದಾಟ ನಡೆಸುತ್ತಿದ್ದ ದೃಶ್ಯಗಳು ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *