ಸಂಬಂಧಿಕರಾಗಿದ್ದರಿಂದ ಮನೆಯಲ್ಲಿ ಮದ್ವೆಗೆ ವಿರೋಧ- ಎಸ್ಕೇಪ್ ಆದ ಮರುದಿನ ಶವವಾಗಿ ಪತ್ತೆ

– 18ರ ಹುಡುಗಿಯ ಜೊತೆ 21ರ ಯುವಕ ಲವ್
– ಒಂದೇ ಮರದಲ್ಲಿ ಪ್ರೇಮಿಗಳು ಆತ್ಮಹತ್ಯೆ

ಲಕ್ನೋ: ತಮ್ಮ ಮದುವೆಗೆ ಕುಟುಂಬದವರು ಒಪ್ಪಿಗೆ ನೀಡಿಲ್ಲ ಎಂದು ಸಂಬಂಧಿಕರಾದ ಯುವಕ-ಯುವತಿ ಮನೆಯಿಂದ ಓಡಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಶನಿವಾರ ಬೆಳಗ್ಗೆ ಇಬ್ಬರೂ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಘಟನೆ ಶಹಜಹಾನಪುರದ ಮದ್ನಾಪುರದ ಪಂಖಾಖೇಡಾ ಗ್ರಾಮದಲ್ಲಿ ನಡೆದಿದೆ. 21 ವರ್ಷದ ಯುವಕ ಮತ್ತು 18 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಷಕರು ತಮ್ಮ ಮದುವೆಯನ್ನು ವಿರೋಧಿಸಿದ ನಂತರ ಶುಕ್ರವಾರ ಮನೆಬಿಟ್ಟು ಓಡಿ ಹೋಗಿದ್ದರು.

ಯುವಕ ಮತ್ತು ಯುವತಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಹುಡುಗ ಹುಡುಗಿಯ ಮಾವನ ಮಗನಾಗಿದ್ದನು. ಆದರೆ ಇವರ ಪ್ರೀತಿಗೆ ಎರಡು ಮನೆಯಲ್ಲಿ ವಿರೋಧ ಇತ್ತು. ಅಲ್ಲದೇ ಯುವಕನ ತಂದೆ ಬೇರೆ ಹುಡುಗಿಯ ಜೊತೆ ಮದುವೆ ಮಾಡಲು ಯೋಜಿಸುತ್ತಿದ್ದರು. ಇದೇ ಕಾರಣದಿಂದ ಯುವಕ ಶುಕ್ರವಾರ ತನ್ನ ತಂದೆಯೊಂದಿಗೆ ಜಗಳ ಮಾಡಿದ್ದಾನೆ. ನಂತರ ಮನೆಯಿಂದ ಹೊರ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತುಂಬಾ ಸಮಯವಾದರೂ ಯುವಕ ಮನೆಗೆ ಬಂದಿರಲಿಲ್ಲ. ಕೊನೆಗೆ ಕುಟುಂಬದವರು ಮಗನನ್ನು ಹುಡುಕಲು ಶುರು ಮಾಡಿದ್ದಾರೆ. ಆಗ 18 ವರ್ಷದ ಹುಡುಗಿಯೂ ಕಾಣೆಯಾಗಿದ್ದಾಳೆ ಎಂದು ಅವರಿಗೆ ಗೊತ್ತಾಗಿದೆ. ಆದರೆ ಶನಿವಾರ ಬೆಳಗ್ಗೆ ಇಬ್ಬರೂ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಯುವಕ ಮತ್ತು ಯುವತಿ ಸಂಬಂಧಿಕರಾಗಿದ್ದರಿಂದ ಪೋಷಕರು ಅವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ನೊಂದ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ನಾವು ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಯಾರ ಮೇಲೆ ಅನುಮಾನ ಬಂದಿಲ್ಲ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *