ಸಂಪುಟ ವಿಸ್ತರಣೆ ನಡುವೆಯೂ ಕೂಲ್ – ಹೋಟೆಲ್‍ನಲ್ಲಿ ದೋಸೆ ಸವಿದ ಸಿಎಂ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಟೆನ್ಷನ್ ಮಧ್ಯೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಲ್ ಆಗಿದ್ದು, ರೇಸ್‍ಕೋರ್ಸ್ ರಸ್ತೆ ಬಳಿ ಇರುವ ಜನಾರ್ದನ ಹೋಟೆಲ್‍ಗೆ ತೆರಳಿ ದೋಸೆ ಸವಿದಿದ್ದಾರೆ.

ಬೆಳಗ್ಗೆಯಿಂದಲೂ ಸಚಿವ ಸಂಪುಟ ವಿಸ್ತರಣೆಯ ಜಂಜಾಟದಲ್ಲಿದ್ದ ಸಿಎಂ ಸಂಜೆಯಾಗುತ್ತಿದ್ದಂತೆ ದೋಸೆ ಸವಿಯಲು ಜನಾರ್ದನ ಹೋಟೆಲ್‍ಗೆ ತೆರಳಿದ್ದಾರೆ. ಸಚಿವ ಆರ್.ಅಶೋಕ್, ಶಾಸಕರಾದ ಎಸ್.ಆರ್.ವಿಶ್ವನಾಥ್, ಕೃಷ್ಣಪ್ಪ ಜೊತೆ ದೋಸೆ ಸವಿದಿದ್ದಾರೆ.

ಕ್ಯಾಬಿನೆಟ್ ಕಡೇ ಆಟ ಕುತೂಹಲ ಮೂಡಿಸಿದ್ದು, ವಲಸಿಗರ ಕೋಟಾದಲ್ಲಿ ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ. ಬಿಜೆಪಿ ಕೋಟಾದಲ್ಲಿ ಉಮೇಶ್ ಕತ್ತಿ, ಎಸ್.ಅಂಗಾರ, ಮುರುಗೇಶ್ ನಿರಾಣಿ ಹಾಗೂ ಸಿಪಿ ಯೋಗೇಶ್ವರ್. ಕಡೇ ಸ್ಥಾನದಲ್ಲಿ ಹಾಲಪ್ಪ ಆಚಾರ್ ಅಥವಾ ಅರವಿಂದ ಲಿಂಬಾವಳಿ ಅವರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಈಗಾಗಲೇ ಮೂವರು ಶಾಸಕರಿಗೆ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ ಎನ್ನಲಾಗಿದೆ. ನಾಳೆ ನೀವು ಬೆಂಗಳೂರಿನಲ್ಲೇ ಇರಿ, ಎಲ್ಲೂ ಹೋಗಬೇಡಿ ಎಂದು ಸೂಚಿಸಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಇಲ್ಲದ ಶಾಸಕರಿಗೆ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ. ಹುಕ್ಕೇರಿಯ ಉಮೇಶ್ ಕತ್ತಿ, ಸುಳ್ಯದ ಅಂಗಾರ, ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಅವರಿಗೆ ಯಡಿಯೂರಪ್ಪ ಕರೆ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *